ಬೆಂಗಳೂರು: ಪ್ರಧಾನಿ Narendra Modi ಅವರು ಇಂದು ಬೆಂಗಳೂರಿಗೆ ಆಗಮಿಸಿದ ವೇಳೆ ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಜೆಪಿ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಮೈಸೂರು ಶಲ್ಯ, ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. ಇದೇ ವೇಳೆ 13 ಕೆಜಿ ತೂಕದ ಭಾರೀ ಬೆಳ್ಳಿಯ ಪ್ರತಿಮೆಯನ್ನು ನೀಡಿ ವಿಶೇಷ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. “ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರ್ತಾರೋ ನನಗೆ ಗೊತ್ತಿಲ್ಲ. ಮತ್ತೊಬ್ಬರಿಗೆ ಅವಕಾಶ ಕೊಡ್ತಾರೋ ಇಲ್ವೋ ಎನ್ನುವ ಗೊಂದಲ ಕಾಂಗ್ರೆಸ್ ಒಳಗೇ ಇದೆ” ಎಂದು ಟೀಕಿಸಿದರು.
ಕರ್ನಾಟಕದ ಜನರೊಂದಿಗೆ ತಮ್ಮ ಆತ್ಮೀಯ ಬಾಂಧವ್ಯವನ್ನು ಪ್ರಧಾನಿ ಮೋದಿ ಸ್ಮರಿಸಿದರು. “ನಾನು ಹಲವು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದ ಬಳಿ ಸಣ್ಣ ಕಾರ್ಯಕ್ರಮ ಮಾಡಿ ತೆರಳುತ್ತಿದ್ದೆ. ಆದರೆ ಈ ಬಾರಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬೆಳಗ್ಗೆಲೇ ಕಾರ್ಯಕರ್ತರು ಸೇರಿರುವುದು ನನಗೆ ಅಪಾರ ಸಂತೋಷ ತಂದಿದೆ. ಬೆಂಗಳೂರಿನ ಈ ನೆಲದಲ್ಲಿ ಕೇಸರಿಯ ಸೂರ್ಯೋದಯವಾಗಿರುವ ಅನುಭವವಾಗುತ್ತಿದೆ” ಎಂದು ಹೇಳಿದರು.
ಕಾರ್ಯಕರ್ತರ ಉತ್ಸಾಹವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, “ನಿಮ್ಮ ಕಣ್ಣುಗಳಲ್ಲಿ ಪಶ್ಚಿಮ ಬಂಗಾಳದ ಗೆಲುವಿನ ಸಂಭ್ರಮ ಕಾಣುತ್ತಿದೆ. ದೇಶದಾದ್ಯಂತ ಬಿಜೆಪಿ ಪರ ಜನಾಭಿಪ್ರಾಯ ಬಲವಾಗುತ್ತಿದೆ ಎಂಬ ಸಂದೇಶ ಇದಾಗಿದೆ” ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಕಳೆದ ಮೂರು ಚುನಾವಣೆಯಿಂದ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು. “ಕಾಂಗ್ರೆಸ್ ಬಳಿ ಅಭಿವೃದ್ಧಿಯ ಯಾವುದೇ ಅಜೆಂಡಾ ಇಲ್ಲ. ಅವರಲ್ಲಿ ನಿರಾಶೆ ಮತ್ತು ಗೊಂದಲ ಮಾತ್ರ ಉಳಿದಿದೆ. ನಮ್ಮ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಜನರ ವಿಶ್ವಾಸಕ್ಕೆ ದ್ರೋಹ ಮಾಡುವ ರಾಜಕಾರಣ ಮಾಡುತ್ತಿದೆ” ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಜಗಳವನ್ನೂ ಪ್ರಧಾನಿ ಟೀಕಿಸಿದರು. “ಜನರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಕುರ್ಚಿ ಕಿತ್ತಾಟ ಮತ್ತು ಆಂತರಿಕ ಜಗಳದಲ್ಲಿ ತೊಡಗಿದ್ದಾರೆ. ರಾಜಸ್ಥಾನದಲ್ಲಿ ಏನಾಯಿತು ಎಂಬುದು ದೇಶಕ್ಕೆ ಗೊತ್ತಿದೆ. ಈಗ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
ಇದೇ ವೇಳೆ ರಾಜ್ಯ ರಾಜಕೀಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಮೋದಿ, “ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರ್ತಾರೋ ನನಗೆ ಗೊತ್ತಿಲ್ಲ. ಮತ್ತೊಬ್ಬರಿಗೆ ಅವಕಾಶ ಕೊಡ್ತಾರೋ ಇಲ್ವೋ ಎನ್ನುವ ಗೊಂದಲ ಕಾಂಗ್ರೆಸ್ ಒಳಗೇ ಇದೆ” ಎಂದು ಟೀಕಿಸಿದರು.
ತಮಿಳುನಾಡಿನ ರಾಜಕೀಯವನ್ನೂ ಉದಾಹರಣೆಯಾಗಿ ಪ್ರಸ್ತಾಪಿಸಿದ ಪ್ರಧಾನಿ, “ಒಂದು ಕಾಲದಲ್ಲಿ ಕಾಂಗ್ರೆಸ್ ಡಿಎಂಕೆ ಜೊತೆಗಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಡಿಎಂಕೆ ವಿರುದ್ಧ ನಿಂತಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವಾಗ ಬೇಕಾದರೂ ನಿಲುವು ಬದಲಾಯಿಸುತ್ತದೆ” ಎಂದು ಆರೋಪಿಸಿದರು.
ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿಯೂ ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದರು. “ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಅಡ್ಡಿಪಡಿಸಿತು. ಅದು ಜಾರಿಯಾಗಿದ್ದರೆ ಸಾಮಾನ್ಯ ವರ್ಗದ ಅನೇಕ ಮಹಿಳೆಯರು ಈಗಾಗಲೇ ವಿಧಾನಸಭೆ ಹಾಗೂ ಸಂಸತ್ತಿಗೆ ಪ್ರವೇಶಿಸಬಹುದಿತ್ತು. ಕರ್ನಾಟಕದ ಮಹಿಳೆಯರು ಕಾಂಗ್ರೆಸ್ ಮಾಡಿದ ಈ ದ್ರೋಹವನ್ನು ಮರೆಯಬಾರದು” ಎಂದು ಹೇಳಿದರು.




