ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 16 ನೇ ಬಜೆಟ್ ಮಂಡಿಸಿದ್ದು, ಬಜೆಟ್ನಲ್ಲಿ ರಾಜ್ಯದ ಹಿತಾದೃಷ್ಟಿಯಿಂದ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಹಾಗೆಯೇ ಮೈಸೂರು ಜಿಲ್ಲೆಗೂ ಅನೇಕ ಪ್ರಮುಖ ಯೋಜನೆಗಳನ್ನು ಅವರು ಅನುಷ್ಠಾನಗೊಳಿಸಿದ್ದಾರೆ. ಬಜೆಟ್ನಲ್ಲಿ ಮೈಸೂರಿಗೆ ನೀಡಿದ ಕೆಲವು ಪ್ರಮುಖ ಅಂಶಗಳು ಇಲ್ಲಿದೆ.
ನಬಾರ್ಡ್ ಸಹಯೋಗದಡಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ
ಮೈಸೂರಿನಲ್ಲಿ ನಬಾರ್ಡ್ ಸಹಯೋಗದಡಿ ಹೊಸ ರೇಷ್ಮೆ ಮಾರುಕಟ್ಟೆಯನ್ನು ಸ್ಥಾಪಿಸುವ ಮೂಲಕ ರೈತರಿಗೆ ಉತ್ತಮ ಮಾರಾಟ ಅವಕಾಶವನ್ನು ಒದಗಿಸುವ ಪ್ರಯತ್ನ ಮಾಡಲಾಗಿದೆ.
ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರದ ಅಧ್ಯಯನಕ್ಕೆ ಉತ್ತೇಜನ ನೀಡಲಾಗಿದೆ.
ಎಂಡೋಕ್ರಿನಾಲಜಿ ಕೇಂದ್ರ ಆರಂಭ
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಹೊಸ ಎಂಡೋಕ್ರಿನಾಲಜಿ ಕೇಂದ್ರವನ್ನು ಪ್ರಾರಂಭಿಸಿ, ಇತ್ತೀಚೆಗೆ ಹೆಚ್ಚುತ್ತಿರುವ ಥೈರಾಯ್ಡ್, ಡಯಾಬಿಟಿಸ್ ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಸುಲಭ ಅವಕಾಶ ಒದಗಿಸಲಾಗಿದೆ.
ನಿಮ್ಹಾನ್ಸ್ ಮಾದರಿಯ ನರ ವಿಜ್ಞಾನ ಆಸ್ಪತ್ರೆ
ಮೈಸೂರಿನಲ್ಲಿ ನರ ವಿಜ್ಞಾನ ಆಸ್ಪತ್ರೆಯನ್ನು ಸ್ಥಾಪಿಸಲು ₹100 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಇದರಿಂದ ಮೆದುಳಿನ ಮತ್ತು ನರ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಗೆ ಉತ್ತಮ ಸೌಲಭ್ಯ ಒದಗಿಸಲಾಗುತ್ತದೆ.
ಬುಡಕಟ್ಟು ಶಾಲೆಯ ಮೇಲ್ದರ್ಜೆಗೇರಿಕೆ
ಮೈಸೂರಿನ ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣದ ಪ್ರಗತಿಗಾಗಿ 12ನೇ ತರಗತಿವರೆಗೆ ಶಾಲೆಯನ್ನು ಮೇಲ್ದರ್ಜೆಗೇರಿಸಲಾಗಿದೆ.
ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ
ಮೈಸೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಗಾಗಿ ₹319 ಕೋಟಿ ಅನುದಾನವನ್ನು ಒದಗಿಸುವ ಮೂಲಕ ವಿಮಾನಯಾನ ಸಂಪರ್ಕ ಸುಧಾರಿಸಲಾಗಿದೆ.
ಕುವೆಂಪು ಅಧ್ಯಯನ ಕೇಂದ್ರದ ಡಿಜಿಟಲೀಕರಣ
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದ ತಾಳೆಗರಿಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸಂಶೋಧನೆಗೆ ಸಹಾಯ ಮಾಡಲಾಗಿದೆ.
ರಂಗಾಯಣ ಕಲಾ ಚಟುವಟಿಕೆಗಳಿಗೆ ಅನುದಾನ
ಮೈಸೂರಿನ ರಂಗಾಯಣ ಕಲಾ ಚಟುವಟಿಕೆಗಳಿಗಾಗಿ ₹2 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಿಂದ ನಾಟಕ ಮತ್ತು ಕಲೆಗಳ ಬೆಳವಣಿಗೆಗೆ ಸಹಾಯವಾಗಲಿದೆ.
ಕ್ರೀಡಾ ವಿಜ್ಞಾನ ಕೇಂದ್ರ ಮತ್ತು ಕ್ರೀಡಾ ಅಕಾಡೆಮಿಗಳು
ಮೈಸೂರಿನಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ ₹3.5 ಕೋಟಿ, ಕುಸ್ತಿ, ವಾಲಿಬಾಲ್, ಖೋ ಖೋ ಅಕಾಡೆಮಿ ಸ್ಥಾಪನೆಗೆ ₹2 ಕೋಟಿ ಅನುದಾನವನ್ನು ಒದಗಿಸಲಾಗಿದೆ, ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಯುವಕರಿಗೆ ಉತ್ತಮ ಅವಕಾಶ ಒದಗಿಸಲಿದೆ.