ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ದಾಳಿ ನಡೆಸಿದ್ದು, ದಾವಣಗೆರೆ, ತುಮಕೂರು ಹಾಗೂ ಬೀದರ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಲೋಕಾ ದಾಳಿ
ದಾವಣಗೆರೆಯ ಫುಡ್ ಸೆಪ್ಟಿ ಇಲಾಖೆಯ ಮೇಲೆ ದಾಳಿ ನಡೆದಿದ್ದು, ಈ ದಾಳಿಯಿಂದ ಅನೇಕ ಅಕ್ರಮಗಳು ಹೊರಬಿದ್ದಿವೆ. ಆಹಾರದ ಗುಣಮಟ್ಟವನ್ನು ಪರೀಕ್ಷಿಸಬೇಕಾದ ಅಧಿಕಾರಿಯೇ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ.
ಫುಡ್ ಸೆಪ್ಟಿ ಇಲಾಖೆಯ ಮುಖ್ಯಸ್ಥ ಡಾ. ನಾಗರಾಜ್ ಅವರ ಮನೆ ಮತ್ತು ಕಚೇರಿಯನ್ನು ಸೇರಿ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಯಿತು. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೇ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಕಚೇರಿಯ ಫ್ರಿಜ್ನಲ್ಲಿ ಸಂಗ್ರಹಿಸಿಡಲಾದ ಆಹಾರದ ಮಾದರಿಗಳು ಕೊಳೆತುಹೋಗಿದ್ದವು. ಅಲ್ಲದೇ, ಸಂಗ್ರಹಿತ ಮಾದರಿಗಳ ಮೇಲಿನ ಡಬ್ಬಿಗಳ ಮೇಲೆ ಯಾವುದೇ ಶಾಂಪಲ್ಸ್ ಕೋಡ್ ಹಾಕದೆ ಅವ್ಯವಸ್ಥಿತವಾಗಿ ಇಡಲಾಗಿತ್ತು.
ಕೊಳೆತ ಆಹಾರದ ಮಾದರಿಗಳು
ಅಧಿಕಾರಿಗಳ ತಪಾಸಣೆಯಲ್ಲಿ ಹತ್ತಾರು ಕೊಳೆತ ಆಹಾರ ಸಾಮಗ್ರಿಗಳು ಪತ್ತೆಯಾಗಿವೆ. ಕೊಳೆತ ದೋಸೆ, ಉಪ್ಪಿಟ್ಟು, ಪುರಿ, ಪಲಾವ್ ಮತ್ತಿತರ ಆಹಾರ ಸಾಮಗ್ರಿಗಳನ್ನು ಬಾಕ್ಸ್ಗಳಲ್ಲಿ ಬೇಜವಾಬ್ದಾರಿಯಾಗಿ ಇಡಲಾಗಿತ್ತು. ಫುಡ್ ಸೆಪ್ಟಿ ಇಲಾಖೆಯು ಸಾರ್ವಜನಿಕರ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿರುವುದನ್ನು ಕಂಡು ಅಧಿಕಾರಿಗಳು ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡರು.
ಡಾ. ನಾಗರಾಜ್ ಅವರ ಮೇಲಿದ್ದ ಹಲವಾರು ಕಲಬೆರಕೆ ಪ್ರಕರಣಗಳ ಬಗ್ಗೆ ದೂರುಗಳಿದ್ದರೂ, ಅವರು ಮೌನವಾಗಿದ್ದು, ಫುಡ್ ಸೆಫ್ಟಿ ಇಲಾಖೆಯ ಕರಾಳ ಮುಖ ಬಯಲಾಗಿದೆ.
ದಾಳಿಯಲ್ಲಿ 35ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿ
ಈ ಮಹತ್ವದ ದಾಳಿಯಲ್ಲಿ ಹಾವೇರಿಯಿಂದ 14 ಜನ ಮತ್ತು ದಾವಣಗೆರೆಯ 25ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು. ಈ ದಾಳಿ ಕೊನೆಗೂ ಆರೋಗ್ಯ ಇಲಾಖೆಯ ಅಕ್ರಮವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ತುಮಕೂರಿನಲ್ಲಿ ಲೋಕಾಯುಕ್ತ ದಾಳಿ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯಲ್ಪೆನಹಳ್ಳಿ ಗ್ರಾಮದಲ್ಲಿ ವೈದ್ಯ ಡಾ. ಜಗದೀಶ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಈ ಶೋಧಕಾರ್ಯ ನಡೆಯುತ್ತಿದ್ದು, ನೀರಿನ ಟ್ಯಾಂಕ್, ಪೈಪ್ ಗಳಲ್ಲಿ ದಾಖಲೆ ಹಾಗೂ ಹಣವನ್ನು ಮುಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮನೆ, ಪೈಪ್ ಟ್ಯಾಂಕ್ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳಿಂದ ಸುದೀರ್ಘ ಶೋಧಕಾರ್ಯ
ಲೋಕಾಯುಕ್ತ ಡಿಎಸ್ಪಿ ರಾಮಕೃಷ್ಣಪ್ಪ ನೇತೃತ್ವದಲ್ಲಿ 12 ಜನ ಅಧಿಕಾರಿಗಳ ತಂಡ ಶೋಧ ನಡೆಸಿದ್ದು, ಚೀಲದಲ್ಲಿ ಇದ್ದ ಮೂಟೆ ಮೂಟೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪತ್ನಿ ಹಾಗೂ ಕುಟುಂಬದವರ ಮೇಲೆ ತನಿಖೆ
ಡಾ. ಜಗದೀಶ್ ಅವರ ಪತ್ನಿ ಹೇಮಲತಾ ಅವರಿಗೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಅವರ ಆಸ್ತಿ ವಿವರಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಇದಲ್ಲದೆ, ಸಹೋದರ ಕಾಂತರಾಜ್ ಹಾಗೂ ಪತ್ನಿ ರೂಪ ಅವರ ಹೆಸರಿನಲ್ಲಿ ದಾಖಲಾಗಿರುವ ಜಮೀನು ಮತ್ತು ಮನೆಗಳ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶಿರಾ ತಾಲೂಕಿನ ತಾವರೇಕೆರೆ ಪಿಎಚ್ಸಿ ಕೇಂದ್ರದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ರೂಪ ಅವರ ತಾಯಿ ಹಾಗೂ ಸಹೋದರರ ಹೆಸರಿನಲ್ಲಿಯೂ ಹಲವಾರು ಆಸ್ತಿಗಳು ಪತ್ತೆಯಾಗಿದೆ. ಅಕ್ರಮ ಆಸ್ತಿ ಮಾಡಿರುವ ಆರೋಪದಡಿ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.
ಬೀದರ್ನಲ್ಲಿ ಲೋಕಾಯುಕ್ತ ದಾಳಿ
ಅಕ್ರಮ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆ ಬೀದರ್ನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ. ಬೆಂಗಳೂರು ಹೆದ್ದಾರಿ ಅಭಿವೃದ್ಧಿ ಇಲಾಖೆಯ ಮುಖ್ಯ ಯೋಜನಾಧಿಕಾರಿ ಜಗನ್ನಾಥ ಹಾಲಿಂಗೆ ಅವರ ನಿವಾಸ ಸೇರಿ ಮೂರು ಕಡೆಗಳ ಮೇಲೆ ಈ ದಾಳಿ ನಡೆದಿದೆ.
ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ
ಬೀದರ್ ನಗರದ ಸಾಹೇಬ್ ನಗರ, ಬಸವಕಲ್ಯಾಣ ತಾಲೂಕಿನ ಧನ್ನೂರಾ ಗ್ರಾಮ ಮತ್ತು ಪಾರ್ಮ್ ಹೌಸ್ ಸೇರಿ ಒಟ್ಟು ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆ ಲೋಕಾಯುಕ್ತಾ ಪೊಲೀಸರಿಂದ ದಾಳಿ ನಡೆದಿದೆ. ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.