ಬೆಂಗಳೂರು: ನಗರದಲ್ಲಿ ದಿನಕ್ಕೊಂದು ಹೊಸ ಸ್ಕ್ಯಾಮ್ಗಳು ನಡೆಯುತ್ತಿರುವುದರ ನಡುವೆ, “ಕೇರಳ ಲಾಟರಿ” ಹೆಸರಿನಲ್ಲಿ ಹೊಸ ವಂಚನೆಗೆ ಎರಡು ವ್ಯಕ್ತಿಗಳು ಬಲಿಯಾಗಿದ್ದಾರೆ. ಪಶ್ಚಿಮ ಬೆಂಗಳೂರಿನ ವಲಗೇರಹಳ್ಳಿ ಮತ್ತು ಮಾರುತಿ ನಗರದ ಇಬ್ಬರು ನಾಗರಿಕರು ಬರೋಬ್ಬರಿ 13.71 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ವಂಚನೆಗೊಳಗಾದವರಲ್ಲಿ ವಲಗೇರಹಳ್ಳಿಯ 60 ವರ್ಷದ ಎನ್ಜಿಒ ಉದ್ಯೋಗಿ ಒಬ್ಬರು 7.45 ಲಕ್ಷ ರೂಪಾಯಿ ಮತ್ತು ಮಾರುತಿ ನಗರದ 52 ವರ್ಷದ ರೈತ ಒಬ್ಬರು 6.26 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ವೆಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಕೇರಳ ಜಾಕ್ಪಾಟ್’ ಅಥವಾ ‘ಕೇರಳ ಸ್ಟೇಟ್ ಲಾಟರಿ’ ಪ್ರತಿನಿಧಿಗಳೆಂದು ಹೇಳಿಕೊಂಡ ಸೈಬರ್ ವಂಚಕರು, ಇಬ್ಬರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ “ನಿಮಗೆ 8 ಲಕ್ಷ ರೂಪಾಯಿ ಲಾಟರಿ ಜ್ಯಾಕ್ಪಾಟ್ ಬಂದಿದೆ” ಎಂದು ನಂಬಿಸಿದ್ದಾರೆ.
ಲಾಟರಿ ಗೆದ್ದಿರುವುದನ್ನು ಖಚಿತಪಡಿಸಿಕೊಳ್ಳಲು ವಂಚಕರು thekeralajackpotresult.online ಎಂಬ ನಕಲಿ ವೆಬ್ಸೈಟ್ ಲಿಂಕ್ ಕಳುಹಿಸಿದ್ದರು. ಸಂತ್ರಸ್ತರು ಲಿಂಕ್ ತೆರೆದಾಗ, ಅವರ ಹೆಸರು ಮತ್ತು ಲಾಟರಿ ಗೆದ್ದ ಮೊತ್ತವನ್ನು ಎಡಿಟ್ ಮಾಡಿ ತೋರಿಸಲಾಗಿತ್ತು. ನಂಬಿಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಸರಿನ ನಕಲಿ ಪತ್ರಗಳನ್ನೂ ಕಳುಹಿಸಿದ್ದರು.
ವಂಚಕರು “ಬಹುಮಾನ ಪಡೆಯಲು ಪ್ರೊಸೆಸಿಂಗ್ ಶುಲ್ಕ, ಟ್ಯಾಕ್ಸ್, ಖಾತೆ ವಿವರ” ಎಂದು ಹೇಳಿ ಹಂತಹಂತವಾಗಿ ಹಣ ವಸೂಲಿ ಮಾಡಿದ್ದಾರೆ. ಹಣ ಪಾವತಿಯ ನಂತರ ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ.
ವೆಸ್ಟ್ ಸೈಬರ್ ಕ್ರೈಮ್ ಪೊಲೀಸರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಫೋನ್ ಸಂಖ್ಯೆ, ಬ್ಯಾಂಕ್ ಖಾತೆಗಳು ಮತ್ತು ಐಪಿ ವಿಳಾಸಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಈ ವಂಚನೆಯ ಹಿಂದೆ ಒಂದೇ ಗ್ಯಾಂಗ್ ಇರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ಸಲಹೆ
- ಯಾವುದೇ ಲಾಟರಿ ಬಹುಮಾನ ಬಂದಿದೆ ಎಂದು ಫೋನ್ ಅಥವಾ ವಾಟ್ಸಾಪ್ ಮೂಲಕ ಬಂದರೆ ನಂಬಬೇಡಿ.
- ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ನಂಬಿ.
- ಹಣ ಪಾವತಿ ಮಾಡುವ ಮುನ್ನ ಪೊಲೀಸ್ ಅಥವಾ ಸೈಬರ್ ಕ್ರೈಮ್ ಠಾಣೆಗೆ ತಿಳಿಸಿ.
ಬೆಂಗಳೂರಿನಲ್ಲಿ ಲಾಟರಿ, ಪ್ರಾಪರ್ಟಿ, ಬ್ಯಾಂಕ್ ಲೋನ್ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿರುವುದು ಗಮನಾರ್ಹ. ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.





