ಬೆಂಗಳೂರು, ಜುಲೈ 17, (ಕರ್ನಾಟಕ ವಾರ್ತೆ) : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನ ಸೌಧದಲ್ಲಿ ರಾಜ್ಯ ಮಟ್ಟದ ರಫ್ತು ಉತ್ತೇಜನಾ ಸಮಿತಿ (SLEPC) ಸಭೆಯು ಯಶಸ್ವಿಯಾಗಿ ಜರುಗಿತು.
ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕವು ಬರೋಬ್ಬರಿ ಶೇಕಡಾ 41 ರಷ್ಟು ಪಾಲು ಹೊಂದುವ ಮೂಲಕ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಹಾಗೆಯೇ, ದೇಶದ ಒಟ್ಟಾರೆ ರಫ್ತು ವಲಯದಲ್ಲಿ ಶೇ. 24 ರಷ್ಟು ಪಾಲು ಪಡೆದು ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.
ಇನ್ನು ಮರ್ಚಂಡೈಸ್ ರಫ್ತಿನಲ್ಲಿ ಶೇ. 7.78 ರಷ್ಟು ಪಾಲಿನೊಂದಿಗೆ ರಾಜ್ಯವು ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ನಾಲ್ಕನೇ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿಗಳಾದ ದರ್ಪಣ್ ಜೈನ್ ಅವರು, ವಿವಿಧ ವಲಯಗಳಲ್ಲಿ ಗುರುತಿಸಲಾದ ರಫ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ‘ರಫ್ತು ಉತ್ತೇಜನಾ ಮಿಷನ್’ (EPM) ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿರುವ ಬೃಹತ್ ಬೆಂಬಲ ಮತ್ತು ಪ್ರಯೋಜನಗಳ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಭಾರತ ಸರ್ಕಾರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು (DGFT) ದೇಶದಾದ್ಯಂತ 120 ಆದ್ಯತೆಯ ಜಿಲ್ಲೆಗಳನ್ನು ಒಳಗೊಂಡ ‘ಡಿಸ್ಟ್ರಿಕ್ಟ್ ಆಸ್ ಎಕ್ಸ್ಪೋರ್ಟ್ ಹಬ್’ (DEH) ಉಪಕ್ರಮದ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಕಾಲಮಿತಿಯ ಆಂದೋಲನವನ್ನು ಹಮ್ಮಿಕೊಂಡಿದೆ. ಇದರ ಮೊದಲ ಹಂತವಾಗಿ ಕರ್ನಾಟಕದ ಪ್ರಮುಖ 5 ಜಿಲ್ಲೆಗಳಾದ ಬೆಂಗಳೂರು ನಗರ, ಬೆಳಗಾವಿ, ಹಾಸನ, ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ (Beyond Bengaluru) ಜಿಲ್ಲೆಗಳಿಗೆ ವಿಶೇಷ ಆದ್ಯತೆ:
ಹೆಚ್ಚುವರಿ ಕಾರ್ಯದರ್ಶಿಗಳು ಜವಳಿ, ಉಡುಪುಗಳು, ರೇಷ್ಮೆ, ಚರ್ಮದ ವಸ್ತುಗಳು, ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳಂತಹ ಕೆಲವು ವಲಯಗಳು ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ ರಫ್ತು ಸಾಮರ್ಥ್ಯವನ್ನು ಹೊಂದಿವೆ ಎಂದು ವಿವರಿಸಿದರು.
ವಿಯೆಟ್ನಾಂ ಸೇರಿದಂತೆ ಜಾಗತಿಕ ಯಶಸ್ವಿ ಮಾದರಿಗಳನ್ನು ಉಲ್ಲೇಖಿಸಿದ ಅವರು, ಪ್ರಮುಖ ಆಂಕರ್ ಕಂಪನಿಗಳು ಹಾಗೂ ಸ್ಯಾಮ್ಸಂಗ್ನಂತಹ ಜಾಗತಿಕ ದೈತ್ಯ ಕಂಪನಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆ ಹಾಗೂ ರಫ್ತು ಸಹಭಾಗಿತ್ವವನ್ನು ವಿಸ್ತರಿಸಲು ಆಸಕ್ತಿ ಹೊಂದಿವೆ ಎಂದು ಸಭೆಗೆ ತಿಳಿಸಿದರು.
ರಫ್ತು ಉತ್ತೇಜನಾ ಮಿಷನ್ (EPM) ಮೂಲಕ ದೊರೆಯುವ ಪ್ರಮುಖ ಸೌಲಭ್ಯಗಳು:
ಬ್ಯಾಂಕುಗಳಿಗೆ ಗ್ಯಾರಂಟಿ ನೀಡುವುದು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಗೆ ಆವರ್ತಕ ನಿಧಿ (Revolving Fund) ಒದಗಿಸುವುದು.
ವಿಮಾನ ನಿಲ್ದಾಣಗಳಲ್ಲಿ ಗೋದಾಮು ಸೌಲಭ್ಯಗಳನ್ನು ಬಳಸಿಕೊಳ್ಳಲು ರಫ್ತುದಾರರಿಗೆ ಆರ್ಥಿಕ ನೆರವು ನೀಡುವುದು.
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ರಫ್ತುದಾರರಿಗೆ ಸರಕು ಸಾಗಣೆ ವೆಚ್ಚದ (Freight Charges) ಮೇಲೆ ಸಬ್ಸಿಡಿ ಸೌಲಭ್ಯ.
ರಾಜ್ಯದಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶ (Buyer-Seller Meet) ಆಯೋಜನೆಗೆ ಕೇಂದ್ರದಿಂದ ಸಂಪೂರ್ಣ ಭರವಸೆ
ಮುಖ್ಯ ಕಾರ್ಯದರ್ಶಿಗಳ ಮಹತ್ವದ ಸೂಚನೆಗಳು:
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯದಲ್ಲಿ ರಫ್ತು ಉತ್ತೇಜನಕ್ಕಾಗಿ ಮತ್ತು ಡಿ.ಇ.ಎಚ್ (D.E.H) ಉಪಕ್ರಮದ ನೋಡಲ್ ಸಂಸ್ಥೆಯಾದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರಕ್ಕೆ (VTPC) ಮಹತ್ವದ ನಿರ್ದೇಶನಗಳನ್ನು ನೀಡಿದರು.
ರಾಜ್ಯದ ರಫ್ತು ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮಗಳನ್ನು (EMTP) ಹಾಗೂ ರಫ್ತು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲು ಸೂಚಿಸಿದರು.
ಉದಯೋನ್ಮುಖ ರಫ್ತುದಾರರು, ಕೈಗಾರಿಕೆಗಳು ಮತ್ತು ವರ್ತಕರಿಗಾಗಿ ಪ್ರಾಯೋಗಿಕ ಕಾರ್ಯಾಗಾರಗಳನ್ನು ನಡೆಸುವ ಮೂಲಕ ರಫ್ತು ಉತ್ತೇಜನಾ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಅವರು ಆದೇಶಿಸಿದರು.
ಬ್ರಿಟನ್ (UK) ದೇಶದೊಂದಿಗೆ ಇತ್ತೀಚೆಗೆ ಮಾಡಿಕೊಳ್ಳಲಾದ ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ವಿವಿಧ FTA (CETA/CEPA) ಒಪ್ಪಂದಗಳಿಂದ ದೊರೆತಿರುವ ಸುವರ್ಣ ಅವಕಾಶಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ಸ್, ಕೃಷಿ ಮತ್ತು ಆಹಾರ ಉತ್ಪನ್ನಗಳು, ಇಂಜಿನಿಯರಿಂಗ್, ಜವಳಿ, ಔಷಧೀಯ ಉತ್ಪನ್ನಗಳು ಮತ್ತು ರೇಷ್ಮೆ ಉತ್ಪನ್ನಗಳ ರಫ್ತನ್ನು ಗಣನೀಯವಾಗಿ ಹೆಚ್ಚಿಸಲು ಮುಖ್ಯ ಕಾರ್ಯದರ್ಶಿಗಳು ಕರೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, VTPC, ಭಾರತ ಸರ್ಕಾರದ DGFT ಪ್ರತಿನಿಧಿಗಳು, ಕೈಗಾರಿಕಾ ಸಂಸ್ಥೆಗಳು, ವಾಣಿಜ್ಯ ಮಂಡಳಿಗಳು ಹಾಗೂ ರಫ್ತು ಉತ್ತೇಜನಾ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.





