ಕರ್ನಾಟಕವು ಮತ್ತೊಮ್ಮೆ ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತು ಕ್ಷೇತ್ರದಲ್ಲಿ ಭಾರತದ ರಾಜ್ಯಗಳ ಪೈಕಿ ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ರಾಜ್ಯದ ಐಟಿ ಸಾಮರ್ಥ್ಯ, ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ಉದ್ಯಮ ಸ್ನೇಹಿ ವಾತಾವರಣದಿಂದ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಾಣಿಜ್ಯ ಗುಪ್ತಚರ ಮತ್ತು ಅಂಕಿ ಅಂಶಗಳ ಮಹಾನಿರ್ದೇಶನಾಲಯ (Directorate General of Commercial Intelligence and Statistics) ನೀಡಿರುವ ಅಂಕಿ ಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಸಾಫ್ಟ್ವೇರ್, ಸೇವೆಗಳು ಮತ್ತು ಸರಕು ರಫ್ತು ವಿಭಾಗಗಳಲ್ಲಿ ಶೇ. 9.3ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಈ ಅವಧಿಯಲ್ಲಿ ಕರ್ನಾಟಕದ ಒಟ್ಟು ರಫ್ತು ಮೌಲ್ಯ ಸುಮಾರು 19.7 ಲಕ್ಷ ಕೋಟಿ ರೂ. ಗೆ ತಲುಪಿದೆ. ವಿಶೇಷವಾಗಿ ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ರಾಜ್ಯವು ಭಾರತದ ಒಟ್ಟು ರಫ್ತಿನ ಶೇ. 41ರಷ್ಟು ಪಾಲನ್ನು ಹೊಂದಿದ್ದು, ಇತರೆ ಪ್ರಮುಖ ರಾಜ್ಯಗಳನ್ನು ಬಹಳಷ್ಟು ಹಿಂದಿಕ್ಕಿದೆ.
ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಇತರ ರಾಜ್ಯಗಳ ಪಾಲು:
ಮಹಾರಾಷ್ಟ್ರ ಶೇ.16
ತಮಿಳುನಾಡು ಶೇ.12.5
ಉತ್ತರ ಪ್ರದೇಶ ಶೇ.5
ಆಂಧ್ರ ಪ್ರದೇಶ ಶೇ.1
ಗುಜರಾತ್ ಶೇ.0.9 ರಷ್ಟು ಪಾಲನ್ನು ದಾಖಲಿಸಿವೆ.
ಸರಕು ರಫ್ತು ಕ್ಷೇತ್ರದಲ್ಲಿಯೂ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಕಬ್ಬಿಣದ ಅದಿರು ಮತ್ತು ಖನಿಜಗಳ ರಫ್ತು ಶೇ.61ರಷ್ಟು ಏರಿಕೆ ಕಂಡಿದ್ದು, ಅತಿ ಹೆಚ್ಚು ಬೆಳವಣಿಗೆ ದಾಖಲಿಸಿದ ವಿಭಾಗವಾಗಿದೆ. ಅದರ ನಂತರ ರಾಸಾಯನಿಕ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ಶೇ.56 ರಷ್ಟು ಹೆಚ್ಚಾಗಿದೆ. ಎಂಜಿನಿಯರಿಂಗ್ ಉತ್ಪನ್ನಗಳು ಶೇ.28.9, ಚರ್ಮದ ಉತ್ಪನ್ನಗಳು ಶೇ.28.5 ಹಾಗೂ ಮಸಾಲೆ ಪದಾರ್ಥಗಳ ರಫ್ತು ಶೇ.24.5 ರಷ್ಟು ಏರಿಕೆ ಕಂಡಿವೆ.
ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ನವೀನ ಆಲೋಚನೆಗಳು ವಿಶ್ವದ ವಿವಿಧ ಮಾರುಕಟ್ಟೆಗಳಿಗೆ ತಲುಪುತ್ತಿರುವುದು ರಾಜ್ಯದ ಆರ್ಥಿಕ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಹೂಡಿಕೆ ಹೆಚ್ಚಿಸುವುದು, ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು, ಉದ್ಯಮಶೀಲತೆಗೆ ಅವಕಾಶ ಕಲ್ಪಿಸುವುದು ಮತ್ತು ಉದ್ಯೋಗ ಸೃಷ್ಟಿಗೆ ವೇಗ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಕರ್ನಾಟಕವನ್ನು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿ ಮತ್ತಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದ್ದಾರೆ.





