ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡರ ಪುತ್ರನ ವಿರುದ್ಧ ಕೇಳಿಬಂದಿರುವ ಪ್ರೇಮ ವಂಚನೆ ಪ್ರಕರಣ ಹೊಸ ತಿರುವು ಸಿಕ್ಕಿದೆ. ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯಾಗಿಸಿ ಬಳಿಕ ಮದುವೆಗೆ ನಿರಾಕರಿಸಿದ ಆರೋಪ ಎದುರಿಸುತ್ತಿರುವ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಯುವತಿಯು ಆರೋಪಿಯಿಂದಲೇ ಮಗುವಿಗೆ ಜನ್ಮ ನೀಡಿರುವುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ, “ಮದುವೆಯಾಗುವುದು ಉತ್ತಮ ಆಯ್ಕೆ” ಎಂದು ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ತಂದೆಯಾಗಿರುವ ಕಾರಣ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯವು ಮತ್ತೊಂದು ಪ್ರಮುಖ ಪ್ರಶ್ನೆ ಕೂಡ ಕೇಳಿದೆ. ಯುವತಿಗೆ ತಿಂಗಳಿಗೆ 10,000 ರೂಪಾಯಿ ಜೀವನಾಂಶ ನೀಡಲು ಆರೋಪಿ ಸಿದ್ಧನಿದ್ದಾನೆಯೇ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಹಿನ್ನೆಲೆ
ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಮತ್ತು ಯುವತಿ ಶಾಲಾ ದಿನಗಳಿಂದಲೇ ಪರಿಚಿತರಾಗಿದ್ದು, ಈ ಪರಿಚಯ ನಂತರ ಪ್ರೀತಿಗೆ ತಿರುಗಿತ್ತು. ಯುವತಿಗೆ ಮದುವೆಯ ಭರವಸೆ ನೀಡಿದ ಕೃಷ್ಣ, ಅವಳನ್ನು ಗರ್ಭವತಿಯಾಗಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಂತರ ಕುಟುಂಬಸ್ಥರು ಮತ್ತು ಸ್ಥಳೀಯ ನಾಯಕರು ಮಧ್ಯಸ್ಥಿಕೆ ವಹಿಸಿ ಮದುವೆಗೆ ಒತ್ತಾಯಿಸಿದಾಗ ಆರಂಭದಲ್ಲಿ ನಿರಾಕರಿಸಿದ್ದ ಆತ, ಕೊನೆಗೆ ಒಪ್ಪಿಕೊಂಡಿದ್ದಾನೆ.
ಆದರೆ, ಆ ಸಮಯದಲ್ಲಿ ಕೃಷ್ಣನಿಗೆ 21 ವರ್ಷ ಪೂರ್ತಿಯಾಗಿರಲಿಲ್ಲ ಎಂಬ ಕಾರಣ ನೀಡಿ ಮದುವೆ ಮುಂದೂಡಲಾಯಿತು. ಆತನ ತಂದೆ, ವಯಸ್ಸು ಪೂರ್ಣಗೊಂಡ ಬಳಿಕ ಮದುವೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಮಗು ಜನಿಸಿದ ನಂತರ ಕೃಷ್ಣ ತನ್ನ ಮಾತು ತಪ್ಪಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ನಡುವೆ, “ಮಗು ನನ್ನದಲ್ಲ” ಎಂದು ಕೃಷ್ಣ ಹೇಳಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಬೆಂಗಳೂರಿನ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಕೃಷ್ಣನೇ ಮಗುವಿನ ತಂದೆ ಎಂಬುದು ದೃಢಪಟ್ಟಿದೆ.





