ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ನಾನಾ ಕಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎನ್.ಆರ್.ಪುರ ತಾಲೂಕಿನ ಸಮೀಪ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮರ ಬಿದ್ದ ಪರಿಣಾಮ ಬಾಳೆಹೊನ್ನೂರು ಮತ್ತು ಕೊಟ್ಟಿಗೆಹಾರ ಮಾರ್ಗದಲ್ಲಿ ಎರಡೂ ಕಡೆ ಕಿಲೋಮೀಟರ್ಗಟ್ಟಲೇ ವಾಹನಗಳ ದಟ್ಟಣೆ ಉಂಟಾಗಿದೆ. ಸ್ಥಳೀಯರು ಸ್ವಯಂಪ್ರೇರಿತರಾಗಿ ಮರ ತೆರವುಗೊಳಿಸಿದ್ದಾರೆ.
ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲೂ ಭಾರೀ ಗಾಳಿ ಮಳೆಯಾಗುತ್ತಿದೆ. ಕಳಸದ ಕುದುರೆಮುಖ ಟಿಬಿ ಸರ್ಕಲ್ನಲ್ಲಿ ಮರ ಬಿದ್ದಿದೆ. 100 ಅಡಿ ಎತ್ತರದಲ್ಲಿದ್ದ ಶೀಟ್ಗಳು ಹಾರಿಹೋಗಿವೆ. ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಆರು ಮನೆಗಳ ಮೇಲ್ಛಾವಣಿ ಹಾರಿಹೋಗಿದೆ. ಅಲಗೇಶ್ವರ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿದ್ದು, ಒಳಗಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜನಗರ: ಗುಂಡ್ಲುಪೇಟೆ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆಯಾಗಿದೆ. 110 ಕೆರೆಗಳ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಡಿಕೆಶಿ ಸೇರಿ ಹಲವು ಸಚಿವರು ಭಾಗಿಯಾಗಿದ್ದರು.
ಹಾಸನ: ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಕಾಲೇಜು ಕಟ್ಟಡ, ಸಮುದಾಯಭವನ, ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿದ್ದ ಶೀಟ್ಗಳು ಹಾರಿ ರಸ್ತೆಗೆ ಬಿದ್ದಿವೆ. ವಾಸದ ಮನೆಯ ಶೀಟ್ಗಳೂ ಹಾರಿ ಹೋಗಿ ಮನೆಯೊಳಗೆ ನೀರು ನುಗ್ಗಿ ವಸ್ತುಗಳಿಗೆ ಹಾನಿಯಾಗಿದೆ.
ಮರದ ಕೊಂಬೆಗಳು ಮುರಿದು ಎರಡು ಕಾರುಗಳು ಜಖಂಗೊಂಡಿವೆ. ಕೊಂಬೆ ವಿದ್ಯುತ್ ತಂತಿಗಳ ಮೇಲೆ ಬಿದ್ದು ತುಂಡಾಗಿದ್ದರಿಂದ ಹಲವು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹಾವೇರಿ: ರಾಣೇಬೆನ್ನೂರು, ಬ್ಯಾಡಗಿ ಸೇರಿ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ರಾಣೇಬೆನ್ನೂರು ನಗರದಲ್ಲಿ ರಸ್ತೆಗಳು ಕೆರೆಯಂತಾಗಿವೆ. ಬಸಲಿಕಟ್ಟಿ ತಾಂಡಾದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ಬ್ಲಾಕ್ ಆಗಿವೆ. ನೀರು ಹೊರ ಹಾಕಲು ಜನರು ಪರದಾಡಿದ್ದಾರೆ.
ಉಡುಪಿ: ಹಲವು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ವಿಪರೀತ ಬಿಸಿಲಿನಿಂದ ಕಂಗಾಲಾಗಿದ್ದ ನಾಗರಿಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ಅಬ್ಬರದ ಮಳೆಯೊಂದಿಗೆ ಬಿರ್ಗೂರು, ಜಿ ಹೊಸಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆಯೂ ವರದಿಯಾಗಿದೆ.





