ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿ ರಾಮಚಂದ್ರ ರಾವ್ ಅವರ ವಿರುದ್ಧ ಈಗಾಗಲೇ ಭಾರೀ ಚರ್ಚೆಗೆ ಕಾರಣವಾಗಿದ್ದ ರಾಸಲೀಲೆ ವಿಡಿಯೊ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ವಿಡಿಯೊ ವೈರಲ್ ಆಗಿದ ಬೆನ್ನಲ್ಲೇ ಇದೀಗ ಡಿಜಿಪಿ ಮತ್ತು ಮಹಿಳೆಯ ನಡುವೆ ನಡೆದಿದ್ದಾರೆ ಎನ್ನಲಾದ ಖಾಸಗಿ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ಆಗಿರುವ ಆಡಿಯೋದಲ್ಲಿ “ಲವ್ ಯೂ ಬಂಗಾರಿ, ಸೋ ಸ್ವೀಟ್… ದಿನಾಲೂ ನಿನ್ನ ನೋಡಬೇಕು, ಮುದ್ದು ಮಾಡಬೇಕು”, “ನಿನ್ನ ನೋಡಿದ್ಮೇಲೆ ನಿದ್ರೆನೇ ಬರ್ತಿಲ್ಲ”, “ನಿನ್ನ ಮಿಸ್ ಮಾಡ್ಕೊಳ್ತಿದ್ದೆ ಚಿನ್ನ” ಎಂಬಂತೆ ಅತ್ಯಂತ ರೊಮ್ಯಾಂಟಿಕ್ ಮತ್ತು ಅಶ್ಲೀಲ ಪದಗಳು ಕೇಳಿಬರುತ್ತಿವೆ. ಈ ಧ್ವನಿ ಡಿಜಿಪಿ ರಾಮಚಂದ್ರ ರಾವ್ ಅವರದ್ದೇ ಎಂಬ ಆರೋಪಗಳು ಕೇಳಿಬಂದಿದೆ..
ಈಗಾಗಲೇ ರಾಸಲೀಲೆ ವಿಡಿಯೊ ವೈರಲ್ ಆದಾಗ ಪ್ರತಿಕ್ರಿಯಿಸಿದ್ದ ಡಿಜಿಪಿ ರಾಮಚಂದ್ರ ರಾವ್, “ಇದು ನನ್ನ ತೇಜೋವಧೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ. ಆ ವಿಡಿಯೊ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ” ಎಂದು ಆರೋಪಿಸಿದ್ದರು. ಈ ಸಂಬಂಧ ಅವರು ದೂರು ದಾಖಲಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಆಡಿಯೋ ವೈರಲ್ ಆಗಿರುವುದರಿಂದ ಅವರ ವಾದದ ಮೇಲೆ ಅನುಮಾನಗಳು ಹೆಚ್ಚಾಗಿವೆ.
ವಿಡಿಯೊ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಡಿಜಿಪಿ ರಾಮಚಂದ್ರ ರಾವ್ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ತೆರಳಿ ವಿವರಣೆ ನೀಡಲು ಯತ್ನಿಸಿದ್ದರು. ಆದರೆ, ಗೃಹ ಸಚಿವರು ಅವರನ್ನು ಭೇಟಿಯಾಗಲು ನಿರಾಕರಿಸಿದ್ದರು.
ಈ ನಡುವೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಅವರು ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಸಮವಸ್ತ್ರದಲ್ಲಿರುವ ಅಧಿಕಾರಿಯೊಬ್ಬರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿರುವುದು ಗಂಭೀರ ಅಪರಾಧ ಎಂದು ಅವರು ಆರೋಪಿಸಿದ್ದಾರೆ. ಕೂಡಲೇ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಗಂಭೀರತೆ ಗಮನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಗೆ ತಕ್ಷಣವೇ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಈ ವಿಚಾರ ನನಗೆ ಇಂದು ಬೆಳಗ್ಗೆ ಗೊತ್ತಾಯಿತು. ಯಾರೇ ಆಗಿರಲಿ, ಎಷ್ಟೇ ದೊಡ್ಡ ಅಧಿಕಾರಿಯಾದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪಿತಸ್ಥರು ಕಂಡುಬಂದರೆ ಶಿಸ್ತು ಕ್ರಮ ಖಂಡಿತ” ಎಂದು ಸ್ಪಷ್ಟಪಡಿಸಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಈಗಾಗಲೇ 10 ದಿನಗಳ ರಜೆ ಮೇಲೆ ತೆರಳಿದ್ದು, ಮೇ 31ರಂದು ನಿವೃತ್ತಿಯಾಗಲಿದ್ದಾರೆ. ನಿವೃತ್ತಿಯ ಹೊಸ್ತಿಲಲ್ಲಿರುವಾಗ ಈ ರೀತಿಯ ವಿವಾದಗಳು ಎದುರಾಗಿರುವುದು ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದೆ.





