ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗಸ್ಟ್ 13ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ಗೆ, ಆರಂಭದಲ್ಲಿ ಬೆಂಬಲ ಘೋಷಿಸಿದ್ದ ಹಲವು ಪ್ರಮುಖ ಸಂಘಟನೆಗಳು ಇದೀಗ ಹಿಂದೆ ಸರಿದಿವೆ. ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದು ಮತ್ತು ಬಹುತೇಕ ಜಲಾಶಯಗಳು ತುಂಬಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಬೆಂಬಲ ವಾಪಸ್ ಪಡೆದ ಸಂಘಟನೆಗಳು
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಹಾಗೂ ಶಿವರಾಮೇಗೌಡ ಬಣಗಳು ಬಂದ್ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ. ಇದೇ ರೀತಿ, ಖಾಸಗಿ ಶಾಲೆಗಳ ಒಕ್ಕೂಟವಾದ ರುಪ್ಪಾ ಕೂಡ ಬಂದ್ನಿಂದ ಹಿಂದೆ ಸರಿದಿದೆ. ರುಪ್ಪಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಅವರು, “ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಸದ್ಯ ಬಂದ್ ಮಾಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಕರವೇ ನಾರಾಯಣ ಗೌಡ ಅವರೂ ಬಂದ್ಗೆ ಬೆಂಬಲ ವ್ಯಕ್ತಪಡಿಸಿಲ್ಲ.
ಇನ್ನು, ಖಾಸಗಿ ಸಾರಿಗೆ ಒಕ್ಕೂಟವೂ ಸಹ ಈ ಬಾರಿ ಬಂದ್ಗೆ ಬೆಂಬಲ ನೀಡಿಲ್ಲ. ರಾಜ್ಯದ ಜಲಾಶಯಗಳಲ್ಲಿ ನೀರು ಲಭ್ಯವಿರುವುದರಿಂದ ಸದ್ಯ ಬಂದ್ ಅಗತ್ಯವಿಲ್ಲ ಎಂದು ಒಕ್ಕೂಟದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾದರೆ ಹೋರಾಟಕ್ಕೆ ಖಂಡಿತ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ. ಆಟೋ ಸಂಘಟನೆಗಳು, ಓಲಾ-ಊಬರ್ ಅಸೋಸಿಯೇಷನ್ ಸೇರಿದಂತೆ ಬಹುತೇಕ ವಾಹನ ಸಂಘಟನೆಗಳು ಬಂದ್ನಿಂದ ದೂರ ಉಳಿದಿವೆ.
ವಾಟಾಳ್ ನಾಗರಾಜ್ ಹೋರಾಟ ಮುಂದುವರಿಕೆ
ಬಂದ್ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಅವರು ಮಾತ್ರ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಬಂದ್ಗೆ ಬೆಂಬಲ ಕೋರುವ ನಿಟ್ಟಿನಲ್ಲಿ ಅವರು ಬೆಂಗಳೂರಿನಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಲಿದ್ದಾರೆ. ಬುಧವಾರ ಅವರು ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರನ್ನು ಭೇಟಿಯಾಗಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ.
ಬಂದ್ಗೂ ಮುನ್ನ ಹುಬ್ಬಳ್ಳಿಯಲ್ಲೂ ಸಭೆ ನಡೆಯಲಿದ್ದು, ಬೆಳಗ್ಗೆ 11.30ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಬಂದ್ ಕುರಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗುವುದು.
ಬಂದ್ನ ಪ್ರಮುಖ ಬೇಡಿಕೆಗಳು
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು, ರಾಜ್ಯದಲ್ಲಿ ಪರಭಾಷೆಯ ದಬ್ಬಾಳಿಕೆ ತಡೆಯಬೇಕು, ಪರಭಾಷೆಯ ಚಿತ್ರಗಳನ್ನು ಬಹಿಷ್ಕರಿಸಬೇಕು ಹಾಗೂ ‘ಹಿಂದಿ ಬೇಡ’ ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಗಳಾಗಿವೆ. ಆನೇಕಲ್ ಮತ್ತು ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮ ಕೈಬಿಡಬೇಕು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು, ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.
ಇನ್ನು ಉತ್ತರ ಕರ್ನಾಟಕದ ಅಭಿವೃದ್ಧಿ, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಬೇಡಿಕೆಗಳು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಹಾಗೂ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂಬ ಆಗ್ರಹವೂ ಇದೆ.





