ಮರಾಠಿ ಪುಂಡರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಘಟನೆಗೆ ವಿರೋಧವಾಗಿ ವಾಟಾಳ್ ನಾಗರಾಜ್ ಮಾರ್ಚ್ 22 ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಅಧ್ಯಕ್ಷ ಟಿಎ ನಾರಾಯಣಗೌಡ, ಈ ಬಂದ್ಗೆ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಗಳಿದ್ದರಿಂದ ಬಂದ್ ಆಯೋಜಿಸುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ತಿಳಿಸಿದ್ದಾರೆ.
“ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ”
ನಾರಾಯಣಗೌಡ ಅವರು ಕನ್ನಡದ ಗೌರವಕ್ಕೆ ಧಕ್ಕೆ ಬಂದರೆ, ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟ ಮಾಡುತ್ತದೆ ಎಂದು ಹೇಳಿದರು. ಅವರು, “ಕರ್ನಾಟಕದ ಯಾವುದೇ ಭಾಗದಲ್ಲಿಯೂ ಕನ್ನಡಕ್ಕೆ ಅವಮಾನ ಆದರೆ ಸಹಿಸಿಕೊಳ್ಳಲ್ಲ” ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದರು.
ಕೊರಟಗೆರೆಯಲ್ಲಿ ಕನ್ನಡ ಬಾವುಟ ತೆರವುಗೊಳಿಸಿರುವುದನ್ನು ಖಂಡಿಸಿ, ಈ ಧ್ವಜವನ್ನು ಪುನಃ ಸ್ಥಾಪಿಸುವ ಬಗ್ಗೆ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಕೆಪಿಎಸ್ಸಿ ನಡೆಸುತ್ತಿರುವ ಕೆಎಎಸ್ ಪರೀಕ್ಷಾ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. 76,000 ಅಭ್ಯರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಅವರಿಗೆ ಸಮಾನತೆ ದೊರಕುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.