ಕಲಬುರಗಿ/ಅಫಜಲಪುರ: ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡುವ ಮತ್ತೊಂದು ವಿವಾದ ಭುಗಿಲೆದ್ದಿದೆ. ಕೈ ಮುಖಂಡನೊಬ್ಬ ಗನ್ ಹಿಡಿದು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಬೆನ್ನಲ್ಲೇ, ಇದೀಗ ಅದೇ ಮುಖಂಡ ದುಡ್ಡು ಹಾರಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್. ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಬಲಗೈ ಬಂಟನಾಗಿರೋ ಮತೀನ್ ಪಟೇಲ್, ಗನ್ ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹೊರಬಂದಿದೆ. ಕಲಬುರಗಿ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಸಿನಿಮಾ ಧುರಂದರ್ ಸಾಂಗ್ಗೆ ಗನ್ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೈ ಮುಖಂಡನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ..
ಮತೀನ್ ಪಟೇಲ್ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಹೊಸ ವಿಡಿಯೋದಲ್ಲಿ, ಮತೀನ್ ಪಟೇಲ್ ಹಣವನ್ನು ಗಾಳಿಗೆ ಎಸೆಯುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಕ್ಯೂಪಿ ಪ್ಯಾಲೇಸ್ (QP Palace) ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಡೆದಿರುವುದು ಎಂದು ತಿಳಿದುಬಂದಿದೆ. ಕಾರ್ಯಕ್ರಮದ ವೇಳೆ ಜನರ ಮುಂದೆ ದುಡ್ಡು ಹಾರಿಸುವ ಮೂಲಕ ಬಿಲ್ಡಪ್ ತೋರಿಸಲು ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಹಣ ಹಾರಾಟದ ವಿಡಿಯೋದಲ್ಲಿ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ, ಕೆಕೆಆರ್ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಅವರ ಮೇಲೆ ಹಣ eಸೆಯುವ ದೃಶ್ಯಗಳು ಕಾಣಿಸುತ್ತಿವೆ ಎನ್ನಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಕೈ ಮುಖಂಡ ಮತೀನ್ ಪಟೇಲ್ಗೆ ಸಂಬಂಧಿಸಿದ ಈ ಎರಡು ವೈರಲ್ ವೀಡಿಯೋಗಳು ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿ ಕೂಡ ಭಾರೀ ಚರ್ಚೆಗೆ ಕಾರಣವಾಗಿವೆ.
ನೀನು ಬಿಜೆಪಿಗೆ ಸಪೋರ್ಟ್ ಮಾಡ್ತೀಯಾ?: ಅಧಿಕಾರಿಗೆ ಪ್ರದೀಪ್ ಈಶ್ವರ್ ಆಪ್ತನ ಬೆದರಿಕೆ ಆಡಿಯೋ ವೈರಲ್
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಲ್ಲೇ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಅಧ್ಯಕ್ಷ ನಾಗೇಶ್ ರೆಡ್ಡಿ ಅವರು ಬೂತ್ ಲೆವೆಲ್ ಅಧಿಕಾರಿ (ಬಿಎಲ್ಓ) ಯೊಬ್ಬರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ, ನಾಗೇಶ್ ರೆಡ್ಡಿ ಅವರು ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್ಓ ಶಿವಶಂಕರ್ ಅವರೊಂದಿಗೆ ಅವಾಚ್ಯ ಪದಗಳನ್ನು ಬಳಸಿಕೊಂಡು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.. ಈ ಘಟನೆ ಚಿಕ್ಕಬಳ್ಳಾಪುರ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಶಂಕರ್ ಅವರು ಮತದಾರರ ಪಟ್ಟಿ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ವೇಳೆ ನಡೆದಿದೆ ಎನ್ನಲಾಗಿದೆ.
ಮತದಾರರ ಪಟ್ಟಿ ಸಂಬಂಧಿಸಿದ ಮಾಹಿತಿಯನ್ನು ನಿಯಮಾನುಸಾರವಾಗಿ ಕೇಳಿದ ಶಿವಶಂಕರ್ ಅವರ ಪ್ರಶ್ನೆಗೆ ಕೋಪಗೊಂಡ ನಾಗೇಶ್ ರೆಡ್ಡಿ, “ನೀನು ಬಿಜೆಪಿಗೆ ಸಪೋರ್ಟ್ ಮಾಡ್ತೀಯಾ?” ಎಂದು ಆರೋಪಿಸಿದ್ದಾರೆ. ಅಲ್ಲದೆ, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವೆ ಎಂಬ ಆರೋಪ ಹೊರಿಸಿ, ಅವಾಚ್ಯ ಭಾಷೆಯಲ್ಲಿ ನಿಂದಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ.
ವೈರಲ್ ಆಡಿಯೋದಲ್ಲಿ, “ಈಗಾಗಲೇ ನನ್ನ ಮೇಲೆ ಎರಡು ಕೇಸ್ ಇದೆ, ಇನ್ನೊಂದು ಕೇಸ್ ಆದರೆ ಏನೂ ಆಗಲ್ಲ. ನನಗೆ ಯಾವ ಭಯವೂ ಇಲ್ಲ” ಎಂದು ನಾಗೇಶ್ ರೆಡ್ಡಿ ಹೇಳಿರುವುದು ಕೇಳಿಬರುತ್ತಿದೆ.
ಈ ವೇಳೆ ಬಿಎಲ್ಓ ಶಿವಶಂಕರ್ ಅವರು, “ನಾನು ಎಲ್ಲರನ್ನೂ ಒಂದೇ ರೀತಿಯಲ್ಲಿ ಕೇಳುತ್ತಿದ್ದೇನೆ. ಯಾವುದೇ ರಾಜಕೀಯ ಉದ್ದೇಶ ಇಲ್ಲ” ಎಂದು ಸ್ಪಷ್ಟನೆ ನೀಡಿದರೂ, ಅದನ್ನು ಪರಿಗಣಿಸದೆ ನಾಗೇಶ್ ರೆಡ್ಡಿ ಮತ್ತೆ ಅವಾಚ್ಯ ಪದಗಳಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. “ನಾನು ಯಾವತ್ತೂ ಮಾತನಾಡಿಲ್ಲ, ಇವತ್ತು ಮಾತನಾಡುತ್ತಿದ್ದೀನಿ” ಎಂದು ಹೇಳುತ್ತಾ, ರಾಜಕೀಯ ಒತ್ತಡ ಹೇರಿದ ಆರೋಪವೂ ಕೇಳಿಬರುತ್ತಿದೆ.
ಇದೇ ವೇಳೆ, ಈ ಆಡಿಯೋ ಶಾಸಕ ಪ್ರದೀಪ್ ಈಶ್ವರ್ ಅವರ ಬೆಂಬಲಿಗನಿಂದ ಬಂದಿದೆ ಎನ್ನಲಾಗುತ್ತಿದ್ದು, ಇದರಿಂದ ಕಾಂಗ್ರೆಸ್ ಪಕ್ಷದೊಳಗೂ ಅಸಮಾಧಾನ ಮೂಡಿದೆ. ಕೆಲ ಕಾಂಗ್ರೆಸ್ ಕಾರ್ಯಕರ್ತರು ಈ ವರ್ತನೆಯನ್ನು ಖಂಡಿಸಿ, ಪಕ್ಷದ ಇಮೇಜ್ಗೆ ಧಕ್ಕೆಯಾಗುತ್ತಿದೆ ಎಂದು ಆಂತರಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸದ್ಯ ಈ ಆಡಿಯೋ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಹಾಗೂ ಶಿಕ್ಷಣ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.





