ಚಿತ್ರದುರ್ಗ ಆಗಸ್ಟ್ 14: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ತಂದೆ ಮಾಡಿದ ಸಾಲದ ವಿಚಾರವನ್ನು ಮುಂದಿಟ್ಟು SSLC ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ ಈ ಕುರಿತಂತೆ ಹೊಳಲ್ಕೆರೆ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಪವನ್ ಹಾಗೂ ಆಕಾಶ್ ಕಡೆಮನೆ ವಿರುದ್ಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
-
ಹೊಳಲ್ಕೆರೆಯಲ್ಲಿ SSLC ವಿದ್ಯಾರ್ಥಿನಿ ಕಿಡ್ನಾಪ್ ಯತ್ನ ಆರೋಪ
ADVERTISEMENTADVERTISEMENT -
ತಂದೆ ಸಾವಾಗಿದೆ ಎಂದು ಸುಳ್ಳು ಹೇಳಿ ಅಪಹರಣಕ್ಕೆ ಪ್ಲ್ಯಾನ್
-
ಯೂತ್ ಕಾಂಗ್ರೆಸ್ ಅಧ್ಯಕ್ಷ ಪವನ್, ಆಕಾಶ್ ಕಡೆಮನೆ ವಿರುದ್ಧ FIR
-
ಶಾಲಾ ಶಿಕ್ಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯನ್ನು ಕಳುಹಿಸುವಂತೆ ಒತ್ತಾಯ
-
ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು; ತನಿಖೆ ಮುಂದುವರಿಕೆ
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಪಟ್ಟಣದ ಖಾಸಗಿ ಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತೆ ಟ್ಯೂಶನ್ ಮುಗಿಸಿ ತನ್ನ ಮನೆಯ ಕಡೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಇಬ್ಬರು ಆರೋಪಿಗಳು ಪೂರ್ವಯೋಜಿತವಾಗಿ ಆಕೆಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ತಂದೆ ಮೃತಪಟ್ಟಿದ್ದಾರೆ ಎಂದು ಆಕೆಯ ಬಳಿ ಸುಳ್ಳು ಮಾಹಿತಿಯನ್ನು ನೀಡಿ, ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಲು ಯತ್ನಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯ ವೇಳೆ ಆರೋಪಿಗಳು ಶಾಲೆಯ ಶಿಕ್ಷಕರಿಗೂ ಕರೆ ಮಾಡಿ, “ವಿದ್ಯಾರ್ಥಿನಿಯನ್ನು ಕೂಡಲೇ ಕಳುಹಿಸಿ” ಎಂದು ಒತ್ತಾಯಿಸಿದ್ದರೆಂದು ತಿಳಿದು ಬಂದಿದೆ. ಶಿಕ್ಷಕರ ಅನುಮಾನ ಹಾಗೂ ವಿದ್ಯಾರ್ಥಿನಿಯ ಎಚ್ಚರಿಕೆಯಿಂದ ಅಪಹರಣ ಯತ್ನ ವಿಫಲವಾಗಿದೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ವಿದ್ಯಾರ್ಥಿನಿಯ ತಂದೆ ಮಾಡಿಕೊಂಡಿದ್ದ ಸಾಲದ ವಿಚಾರದಲ್ಲಿ, ಆಕೆಯ ಚಿಕ್ಕಪ್ಪನನ್ನು ಚಿತ್ರಹಳ್ಳಿ ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗಿದೆ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ದೂರು ದಾಖಲಿಸುವಲ್ಲಿಯೂ ಪೊಲೀಸರು ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿದೆ.
ಘಟನೆಯ ಬಳಿಕ ಭಯಭೀತಳಾದ ವಿದ್ಯಾರ್ಥಿನಿ “ನಾನು ಇನ್ನು ಶಾಲೆಗೆ ಹೋಗುವುದಿಲ್ಲ” ಎಂದು ಹಠ ಹಿಡಿದಿದ್ದು, ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಚಿತ್ರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.





