ಬೆಂಗಳೂರು (ಆಗಸ್ಟ್ 14): ಈಶಾನ್ಯ ಭಾರತದ ವಿಶಿಷ್ಟ ಹಾಗೂ ರುಚಿಕರವಾದ ಕೃಷಿ ಉತ್ಪನ್ನಗಳು ಇದೀಗ ದೇಶದ ಇತರ ಭಾಗಗಳಿಗೂ ಸುಲಭವಾಗಿ ತಲುಪುತ್ತಿವೆ. ಪ್ರಮುಖ ಕ್ವಿಕ್ ಕಾಮರ್ಸ್ ವೇದಿಕೆಯಾದ ‘ಇನ್ ಸ್ಟಾಮಾರ್ಟ್’ ಈಶಾನ್ಯ ರಾಜ್ಯಗಳ ರೈತರು ಬೆಳೆದ ಅಪರೂಪದ ಹಣ್ಣು-ತರಕಾರಿಗಳನ್ನು ದಕ್ಷಿಣ ಮತ್ತು ಪಶ್ಚಿಮ ಭಾರತದ ಗ್ರಾಹಕರಿಗೆ ತಲುಪಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರಿಗೆ ಬಂತು ಮೇಘಾಲಯದ ಅನಾನಸ್
ಈ ಯೋಜನೆಯ ಮೊದಲ ಹಂತವಾಗಿ ಮೇಘಾಲಯದ ಪ್ರೀಮಿಯಂ ಗುಣಮಟ್ಟದ ಅನಾನಸ್ ಹಣ್ಣುಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಜಿರಾಂಗ್ ಆರ್ಗ್ಯಾನಿಕ್ ಆಗ್ರೋ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮೂಲಕ ಈ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತಿದೆ.
ಈ ಮೊದಲು ಅಲ್ಲಿನ ರೈತರು ಕೇವಲ ದೆಹಲಿಯ ಸಗಟು ಮಾರುಕಟ್ಟೆ ಅಥವಾ ಸ್ಥಳೀಯ ಬೇಡಿಕೆಯನ್ನೇ ಅವಲಂಬಿಸಿದ್ದರು. ಆದರೆ ಈಗ ಬೆಂಗಳೂರಿನಂತಹ ಮಹಾನಗರಗಳಿಗೆ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಇದು ಅಲ್ಲಿನ ರೈತರಿಗೆ ವರದಾನವಾಗಿದೆ.
ಮೇಘಾಲಯ ಮುಖ್ಯಮಂತ್ರಿ ಮೆಚ್ಚುಗೆ
ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಕಲ್ಪಿಸುತ್ತಿರುವ ಈ ಪ್ರಯತ್ನವನ್ನು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಕೆ. ಸಂಗ್ಮಾ ಅವರು ಶ್ಲಾಘಿಸಿದ್ದಾರೆ. “ರಾಜ್ಯದ ರೈತರಿಗೆ ಉತ್ತಮ ಮಾರುಕಟ್ಟೆ ಸಂಪರ್ಕ ಒದಗಿಸುವ ಮತ್ತು ಮೇಘಾಲಯದ ಕೃಷಿಯ ಹೆಮ್ಮೆಯನ್ನು ದೇಶದಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ,” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಸಿಗಲಿವೆ ಅಪರೂಪದ ಉತ್ಪನ್ನಗಳು
ಬರೀ ಅನಾನಸ್ ಮಾತ್ರವಲ್ಲ, ಮುಂದಿನ 12 ರಿಂದ 24 ತಿಂಗಳುಗಳಲ್ಲಿ ಈಶಾನ್ಯ ಭಾರತದ ಭೌಗೋಳಿಕ ಮಾನ್ಯತೆ ಪಡೆದ ಹಲವು ವಿಶಿಷ್ಟ ಉತ್ಪನ್ನಗಳನ್ನು ದೇಶದಾದ್ಯಂತ ತಲುಪಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಮೇಘಾಲಯದ ಖಾಸಿ ಮ್ಯಾಂಡರಿನ್ ಕಿತ್ತಳೆ, ಅಸ್ಸಾಂನ ಕರ್ಬಿ ಆಂಗ್ಲಾಂಗ್ ಶುಂಠಿ ಮತ್ತು ತೇಜ್ಪುರ ಲಿಚಿ, ಮಣಿಪುರದ ಕಚಾಯ್ ನಿಂಬೆಯ ಜೊತೆಗೆ ಕಿವಿ ಹಣ್ಣು ಮತ್ತು ಬೆಳ್ಳುಳ್ಳಿಯನ್ನು ಸಹ ರೈತರಿಂದ ನೇರವಾಗಿ ಖರೀದಿಸಿ ಪೂರೈಸುವ ಬಗ್ಗೆ ಚಿಂತನೆ ನಡೆದಿದೆ.
ಈ ಬಗ್ಗೆ ವಿವರ ನೀಡಿದ ಇನ್ಸ್ಟಾಮಾರ್ಟ್ನ ಚೀಫ್ ಬಿಸಿನೆಸ್ ಆಫೀಸರ್ ಗೌತಮ್ ಸ್ವರೂಪ್, “ಈಶಾನ್ಯ ಭಾರತವು ಅತ್ಯುನ್ನತ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದುವರೆಗೂ ಅವು ಕೇವಲ ಸ್ಥಳೀಯ ಮಾರುಕಟ್ಟೆಗಷ್ಟೇ ಸೀಮಿತವಾಗಿದ್ದವು. ಈಗ ನಮ್ಮ ನೆಟ್ವರ್ಕ್ ಮೂಲಕ ರೈತರಿಗೆ ಹೊಸ ಮಾರುಕಟ್ಟೆ ಸೃಷ್ಟಿಸುತ್ತಿದ್ದೇವೆ,” ಎಂದರು.
ಜಿರಾಂಗ್ ಎಫ್ಪಿಒ ಸಿಇಒ ಇಬಾ ತಂಗ್ಖೀವ್ ಪ್ರತಿಕ್ರಿಯಿಸಿ, “ಗ್ರಾಮೀಣ ಭಾಗದ ರೈತರಿಗೆ ಇದೊಂದು ಹೆಮ್ಮೆಯ ಸಂಗತಿ. ಇದರಿಂದ ನಮ್ಮ ರೈತರಿಗೆ ಪ್ರೀಮಿಯಂ ಮಾರುಕಟ್ಟೆಯ ಸಂಪರ್ಕ ಸಿಗಲಿದ್ದು, ಅವರ ಕಠಿಣ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿದೆ. ಈ ಅವಕಾಶ ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಇನ್ಸ್ಟಾಮಾರ್ಟ್ ಈಗಾಗಲೇ ದೇಶಾದ್ಯಂತ 430ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳೊಂದಿಗೆ ಕೈಜೋಡಿಸಿದ್ದು, 10,000ಕ್ಕೂ ಹೆಚ್ಚು ರೈತರಿಂದ ನೇರವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುತ್ತಿದೆ. ಇದೀಗ ಈಶಾನ್ಯ ರಾಜ್ಯಗಳ ವಿಶಿಷ್ಟ ಬೆಳೆಗಳತ್ತ ಮುಖಮಾಡಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಭರವಸೆ ಮೂಡಿಸಿದೆ.





