ಗಂಗಾಕಲ್ಯಾಣ ಯೋಜನೆ ಅಡಿ ಕೊಳವೆಬಾವಿಗಳ ಭೌತಿಕ ಗುರಿ ಕಡಿಮೆ ಇದೆ ಎನ್ನುವ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಗಿದ್ದು, ಸದರಿ ಕೊಳವೆಬಾವಿಗಳ ಗುರಿಯ(ಟಾರ್ಗೆಟ್) ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ಸರ್ಕಾರ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಚುಕ್ಕೆಗುರುತಿನ ಪ್ರಶ್ನೆಗೆ ಸದಸ್ಯರಾದ ಸುನೀಲಕುಮಾರ್ ವಿ.ಡಾ.ಚಂದ್ರು ಲಮಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬಡಜನರನ್ನು ಮೆಲೆತ್ತುವ ಉದ್ದೇಶದಿಂದ ಗಂಗಾಕಲ್ಯಾಣ, ಭೂ ಒಡೆತನ ಯೋಜನೆಗಳನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರ್ಕಾರ.
ಕಾಂಗ್ರೆಸ್ ಬಡವರ ಅಭಿವೃದ್ಧಿಯ ಬಗ್ಗೆ ಬದ್ಧತೆ ಇದ್ದು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಹೆಚ್ಚಳ, ಗಂಗಾಕಲ್ಯಾಣ ಯೋಜನೆಯ ಭೌತಿಕ ಗುರಿ ಹೆಚ್ಚಳ ಮತ್ತು ಭೂ ಒಡೆತನ ಯೋಜನೆಗೆ ವಿಶೇಷ ಒತ್ತು ನೀಡಲಾಗುವುದು ಸದನಕ್ಕೆ ತಿಳಿಸಿದ ಸಚಿವ ಮಹಾದೇವಪ್ಪ ಅವರು ಸದನದ ಸದಸ್ಯರು ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು. ನಾವು ಮಾಡಬೇಕಾಗಿರುವ ಕೆಲಸಗಳನ್ನು ಮಾಡೇ ಮಾಡಲಾಗುವುದು, ಮಾಡಲಾರದ್ದನ್ನು ಮಾಡಲಾಗುವುದಿಲ್ಲ ಎಂದು ಹೇಳಿದರು.
ಭೂ ಚೇತನ ಯೋಜನೆ ಅಡಿ ವಿಜಯಪುರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು,ಈಗಾಗಲೇ ತನಿಖೆಗೆ ಸೂಚಿಸಲಾಗಿದ್ದು,ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.