ಯಾದಗಿರಿ: ಪ್ರಾಂಚೈಸಿ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚನೆ ಮಾಡಿದ ಆರೋಪದಡಿ ದೆಹಲಿ ಮೂಲದ ಖಾಸಗಿ ಕಂಪನಿ ಹಾಗೂ ಅದರ ಪ್ರತಿನಿಧಿಗಳ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂಪರ್ ಬಜಾರ್ ಕಿರಾಣಿ ಮತ್ತು ಆಯುರ್ಕ್ಯೂರ್ ಹೆಲ್ತ್ ಪ್ರಾಂಚೈಸಿ ನೀಡುವುದಾಗಿ ಭರವಸೆ ನೀಡಿ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆಂಭಾವಿ ಪಟ್ಟಣದ ನಿವಾಸಿ ಕಾಂತಮ್ಮ ಅವರು ದೂರು ಸಲ್ಲಿಸಿದ್ದು, 2021ರ ಸೆಪ್ಟೆಂಬರ್ ತಿಂಗಳಲ್ಲಿ ಜೇವರ್ಗಿ ಪಟ್ಟಣದ ಮಹಾಲಕ್ಷ್ಮೀ ಹೊಟೇಲ್ನಲ್ಲಿ ನಡೆದ ಸಭೆಯೊಂದರಲ್ಲಿ ದೆಹಲಿ ಮೂಲದ ಆಕ್ಸಿಸ್ ಇ-ಕಾರ್ಪ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿಗಳಾದ ಅನೀಲ್ ಕುಮಾರ ಜಾಧವ್, ಆನಂದ ತವಡೆ, ಸಂಜನಾ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸೂಪರ್ ಬಜಾರ್ ಕಿರಾಣಿ ಪ್ರಾಂಚೈಸಿ ನೀಡುವ ಬಗ್ಗೆ ಆಕರ್ಷಕ ಭರವಸೆ ನೀಡಲಾಗಿದೆ.
ಪ್ರಾಂಚೈಸಿಗಾಗಿ 25 ಲಕ್ಷ ರೂಪಾಯಿ ಮುಂಗಡ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 1 ಲಕ್ಷ ರೂಪಾಯಿಯಂತೆ 35 ತಿಂಗಳು ಮರುಪಾವತಿ ಮಾಡುವುದರ ಜೊತೆಗೆ ಮಾರಾಟದ ಮೇಲೆ ಶೇ.5ರಷ್ಟು ಲಾಭಾಂಶ ನೀಡುವುದಾಗಿ ಕಂಪನಿ ಪ್ರತಿನಿಧಿಗಳು ತಿಳಿಸಿದ್ದರು. ಈ ಭರವಸೆಗೆ ನಂಬಿಕೆ ಇಟ್ಟುಕೊಂಡ ಕಾಂತಮ್ಮ ಅವರು 17.09.2021 ಹಾಗೂ 12.10.2021ರಂದು RTGS ಮೂಲಕ ಒಟ್ಟು 25 ಲಕ್ಷ ರೂಪಾಯಿಗಳನ್ನು ಕಂಪನಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಆರಂಭದಲ್ಲಿ ಕಂಪನಿಯವರು ಕೇವಲ ಐದು ತಿಂಗಳು ಮಾತ್ರ ಒಟ್ಟು 5 ಲಕ್ಷ ರೂಪಾಯಿಯನ್ನು ಪಾವತಿಸಿದ್ದು, ನಂತರ ಯಾವುದೇ ಪಾವತಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಭರವಸೆ ನೀಡಿದಂತೆ ಸೂಪರ್ ಬಜಾರ್ ಅಂಗಡಿಯನ್ನು ಆರಂಭಿಸದೇ, ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ರೀತಿ, ಆಯುರ್ಕ್ಯೂರ್ ಹೆಲ್ತ್ ಪ್ರಾಂಚೈಸಿ ನೀಡುವುದಾಗಿ ಪ್ರತ್ಯೇಕವಾಗಿ 5 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಪ್ರಾಂಚೈಸಿ ಯಾವುದೇ ಅಂಗಡಿ ಆರಂಭಿಸದೇ, ನಿಗದಿತ ಅವಧಿಯಲ್ಲಿ ಹಣ ಪಾವತಿಸದೇ ಮೋಸ ಮಾಡಿದ್ದಾರೆ ಎಂದು ಕಾಂತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಹೂಡಿಕೆ ಮಾಡಿದ ಹಣವನ್ನು ಮರಳಿ ಕೇಳಿದಾಗ, ಕಂಪನಿ ಪ್ರತಿನಿಧಿಗಳು ಸತತವಾಗಿ ತಪ್ಪಿಸಿಕೊಳ್ಳುತ್ತಾ ಬಂದಿದ್ದಾರೆ. ನಂತರ ಸಂಪರ್ಕಕ್ಕೆ ಸಿಗದೆ, ಸುಳ್ಳು ಭರವಸೆ ನೀಡುತ್ತಾ ವಂಚನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದರಿಂದಾಗಿ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





