ಧಾರವಾಡ: ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಹೆತ್ತ ಮಗಳನ್ನೆ ಕೊಲೆ ತಂದೆಯೊಬ್ಬ ಕೊಲೆಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ. ಸಮಾಜದ ಕಟ್ಟುಪಾಡುಗಳ ಮುಂದೆ ಮಾನವೀಯತೆ ಮರೆತ ತಂದೆ, ತನ್ನ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಲೆ ಮಾಡಿ ಮರ್ಯಾದಾ ಹತ್ಯೆಯ ಪೈಶಾಚಿಕ ನಡೆಸಿದ್ದಾರೆ.
ಕೊಲೆಯಾದ ಯುವತಿ ಮಾನ್ಯಾ ಮತ್ತು ಅದೇ ಗ್ರಾಮದ ವಿವೇಕಾನಂದ ಎಂಬುವವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಾನ್ಯಾ ವರೂರಿನ ಖಾಸಗಿ ಕಾಲೇಜಿನಲ್ಲಿ ಹಾಗೂ ವಿವೇಕಾನಂದ ಹುಬ್ಬಳ್ಳಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಇನ್ಸ್ಟಾಗ್ರಾಂ ಮೂಲಕ ಇಬ್ಬರ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಇಬ್ಬರ ನಡುವಿನ ಪ್ರೇಮಕ್ಕೆ ತಿರುಗಿದೆ.
ಮಾನ್ಯಾ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ವಿವೇಕಾನಂದ ದಲಿತ ಸಮುದಾಯದವರಾಗಿದ್ದರು. ಈ ವಿಷಯ ತಿಳಿದ ಯುವತಿಯ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿವೇಕಾನಂದನ ಬಿಟ್ಟು ಬದುಕಲಾರೆ ಎಂದು ಹಠ ಹಿಡಿದಿದ್ದ ಮಾನ್ಯಾ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಬಳಿಕ ವಿವೇಕಾನಂದ, ಜೂನ್ 19 ರಂದು ಹುಬ್ಬಳ್ಳಿಯಲ್ಲಿ ಮಾನ್ಯಾ ಜೊತೆ ನೋಂದಾಯಿತ(ರಿಜಿಸ್ಟ್ರ್ರ್) ವಿವಾಹವಾಗಿದ್ದರು.
ಮದುವೆಯ ನಂತರ ಎರಡು ಕುಟುಂಬಗಳ ನಡುವೆ ಸಂಘರ್ಷ ಉಂಟಾದಾಗ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ರಾಜಿ ಸಂಧಾನ ಮಾಡಿಸಿದ್ದರು. ಪ್ರಾಣಭಯದಿಂದ ದಂಪತಿ ಊರು ಬಿಟ್ಟು ಹಾವೇರಿಯಲ್ಲಿ ನೆಲೆಸಿದ್ದರು. ಈ ಅವಧಿಯಲ್ಲಿ ಮಾನ್ಯಾ ಗರ್ಭಿಣಿಯಾಗಿದ್ದರು. ಅಷ್ಟರಲ್ಲಿ ಎಲ್ಲಾ ಕೋಪ ತಣ್ಣಗಾಗಿರಬಹುದು ಎಂದು ಭಾವಿಸಿದ ದಂಪತಿ, ಡಿಸೆಂಬರ್ 8 ರಂದು ಸ್ವಗ್ರಾಮಕ್ಕೆ ಮರಳಿದ್ದರು.
ಹಳ್ಳಿಗೆ ಮರಳಿದ ಮೇಲೂ ಮತ್ತೆ ಕಿರಿಕ್ ಶುರುವಾದಾಗ ಪೊಲೀಸರು ಮತ್ತೊಮ್ಮೆ ಶಾಂತಿ ಸಭೆ ನಡೆಸಿದ್ದರು. ಆದರೆ ಇದಾದ ಎರಡೇ ವಾರದಲ್ಲಿ ದಂಪತಿಗಳ ಮೇಲೆ ದಾಳಿ ನಡೆಸಲಾಗಿದೆ. ಭಾನುವಾರ ಸಂಜೆ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಆತನ ಸಂಬಂಧಿಕರು ವಿವೇಕಾನಂದನ ಮನೆಗೆ ನುಗ್ಗಿದ್ದಾರೆ. ಮಾನ್ಯಾ, ಆಕೆಯ ಅತ್ತೆ ಮತ್ತು ಮಾವನ ಮೇಲೆ ಪೈಪ್ ಹಾಗೂ ಗುದ್ದಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಾನ್ಯಾ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಘೋರ ಕೃತ್ಯದ ಬಳಿಕ ವಿವೇಕಾನಂದನ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.





