ಕಲಬುರಗಿ: ಇದುವರೆಗೆ ಕೇವಲ ಸಂಘಟಿತ ವಲಯದ ಕಾರ್ಮಿಕರಿಗೆ ಸೀಮಿತವಾಗಿದ್ದ ಇಎಸ್ಐಸಿ (ESIC) ಆಸ್ಪತ್ರೆಗಳ ಉಚಿತ ವೈದ್ಯಕೀಯ ಸೇವೆಯು, ಇನ್ಮುಂದೆ ಅಸಂಘಟಿತ ವಲಯದ ಕಾರ್ಮಿಕರಿಗೂ ಲಭ್ಯವಾಗಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರಾದ ಶೋಭಾ ಕರಂದ್ಲಾಜೆ ಘೋಷಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಯಾರಿಗೆಲ್ಲಾ ಸಿಗಲಿದೆ ಲಾಭ?
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೃಷಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಗಿಗ್ ವರ್ಕರ್ಸ್ (ಡೆಲಿವರಿ ಬಾಯ್ಸ್, ಆ್ಯಪ್ ಆಧಾರಿತ ಕೆಲಸಗಾರರು) ಸೇರಿದಂತೆ ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷಾಂತರ ಶ್ರಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಗುಣಮಟ್ಟದ ಚಿಕಿತ್ಸೆ ಇನ್ಮುಂದೆ ಉಚಿತವಾಗಿ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಬ್ಬ ಶ್ರಮಿಕನಿಗೂ ಆರೋಗ್ಯ ಭದ್ರತೆ ಒದಗಿಸುವುದು ನಮ್ಮ ಗುರಿ ಎಂದು ಸಚಿವೆ ಶೋಬಾ ಶೋಭಾ ಕರಂದ್ಲಾಜೆ ತಿಳಿಸಿದರು.
ಕಾರ್ಮಿಕರ ಮಕ್ಕಳಿಗಾಗಿ 10 ಹೊಸ ಮೆಡಿಕಲ್ ಕಾಲೇಜು:
ಕಾರ್ಮಿಕರ ಕುಟುಂಬದ ಶೈಕ್ಷಣಿಕ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡುತ್ತಿದ್ದು, ದೇಶಾದ್ಯಂತ ಹೊಸದಾಗಿ 10 ಇಎಸ್ಐಸಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಈಗಾಗಲೇ ಎರಡು ಇಎಸ್ಐಸಿ ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯ ಮೆಡಿಕಲ್ ಸೀಟುಗಳು ಕಾರ್ಮಿಕರ ಮಕ್ಕಳಿಗೆ ಲಭ್ಯವಾಗಲಿವೆ.
ವೈದ್ಯರ ನೇಮಕಾತಿಗೆ ಕ್ರಮ:
ಇಎಸ್ಐಸಿ ಆಸ್ಪತ್ರೆಗಳಲ್ಲಿ ಕಂಡುಬರುತ್ತಿರುವ ವೈದ್ಯರ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ನೇಮಕಾತಿ ನಿಯಮಗಳಲ್ಲಿ ಮಹತ್ವದ ಸರಳೀಕರಣ ಮಾಡಿದೆ. ಅಗತ್ಯವಿರುವ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ಶೀಘ್ರವೇ ನೇಮಕ ಮಾಡಿಕೊಳ್ಳುವ ಮೂಲಕ ಆಸ್ಪತ್ರೆಗಳ ಸೇವೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ಕಲಬುರಗಿಯಲ್ಲಿ ಕ್ರೀಡಾ ಸಂಕೀರ್ಣ, ಛಾವಣಿಯ ಸೌರ ವಿದ್ಯುತ್ ವ್ಯವಸ್ಥೆ ಮತ್ತು ಅಂತರ್ಜಲ ಮರುಪೂರಣ ಸೌಲಭ್ಯಗಳನ್ನು ಉದ್ಘಾಟಿಸಿದ ಸಚಿವರು, ಜಿಲ್ಲೆಯ ಬಾಹ್ಯಾಕಾಶ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.





