ಬೆಂಗಳೂರು: ಬೆಂಗಳೂರಿನ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ಪ್ರದೇಶದಲ್ಲಿ ತಾಯಿ ತನ್ನ 14 ವರ್ಷದ ಮಗಳನ್ನು ಕೊಂದು ನಂತರ ತಾನೇ ಆತ್ಮಹತ್ಯೆಗೆ ಶರಣಾದ ಘೋರ ಘಟನೆ ನಡೆದಿದೆ. ಈ ದುರಂತದಲ್ಲಿ 14 ವರ್ಷದ ಬಾಲಕಿ ಕಾರುಣ್ಯ ಮತ್ತು ಅವಳ ತಾಯಿ ಸುವರ್ಣ ಮೃತಪಟ್ಟಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸುವರ್ಣ ಅವರು ಮೊದಲು ತನ್ನ ಮಗಳು ಕಾರುಣ್ಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾನು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವೈಟ್ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಸುವರ್ಣ ಅವರು ತೀವ್ರ ಹಣಕಾಸಿನ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಕುಟುಂಬದಲ್ಲಿ ಆರ್ಥಿಕ ತೊಂದರೆಗಳು ಹೆಚ್ಚಾಗುತ್ತಿದ್ದಂತೆ ಸುವರ್ಣ ಅವರ ಮನಸ್ಥಿತಿ ಬಹಳ ಕೆಟ್ಟುಹೋಗಿತ್ತು ಎನ್ನಲಾಗಿದೆ. ಆದರೆ ತನ್ನ 14 ವರ್ಷದ ಮಗಳನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ತೀವ್ರ ಮಟ್ಟಕ್ಕೆ ಖಿನ್ನತೆ ತಲುಪಿತ್ತು ಎಂಬುದು ಪೊಲೀಸರಿಗೂ ಸಂಶಯ ಮೂಡಿಸುವ ವಿಷಯವಾಗಿದೆ.
ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಸುವರ್ಣ ಅವರು ಶಾಂತ ಸ್ವಭಾವದ ವ್ಯಕ್ತಿ. ಹಣಕಾಸಿನ ಸಮಸ್ಯೆ ಇದ್ದರೂ ಮಗಳನ್ನು ಕೊಂದು ತಾನು ಸಾಯುವುದು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ ಎಂದರು”.
ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಸುವರ್ಣ ಅವರು ಏಕೆ ಇಂತಹ ಘೋರ ನಿರ್ಧಾರಕ್ಕೆ ಬಂದರು, ಅವರ ಮನಸ್ಥಿತಿ ಹೇಗಿತ್ತು, ಕುಟುಂಬದಲ್ಲಿ ಬೇರೆ ಯಾರಾದರೂ ಇದ್ದರೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ಪ್ರಸ್ತುತ ಘಟನೆಯಲ್ಲಿ ಆತ್ಮಹತ್ಯೆಯ ಜೊತೆಗೆ ಕೊಲೆಯೂ ಇರುವುದರಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.





