ಚಂಡೀಗಢ ಆ. 16: ಪಂಜಾಬ್ನ ಅಮೃತಸರ ಗ್ರಾಮೀಣ ಪೊಲೀಸರು ಆ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ 690 ಗ್ರಾಂ ತೂಕದ ಸುಧಾರಿತ ಸ್ಫೋಟಕ ಸಾಧನ (IED), ಎಲೆಕ್ಟ್ರಾನಿಕ್ ಡಿಟೋನೇಟರ್, ಬ್ಯಾಟರಿ, ಟೈಮರ್ ಹಾಗೂ ಕಬ್ಬಿಣದ ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮುಖ್ಯಾಂಶಗಳು
-
ಅಮೃತಸರದಲ್ಲಿ ಪೊಲೀಸ್ ಠಾಣೆ ಗುರಿಯಾಗಿಸಿದ್ದ ಭಯೋತ್ಪಾದಕ ಸಂಚು ವಿಫಲ
-
690 ಗ್ರಾಂ IED, ಡಿಟೋನೇಟರ್, ಬ್ಯಾಟರಿ ಮತ್ತು ಟೈಮರ್ ವಶ
-
ಬಾಂಬ್ ನಿಷ್ಕ್ರಿಯ ದಳದಿಂದ ಸ್ಫೋಟಕ ಯಶಸ್ವಿಯಾಗಿ ನಿಷ್ಕ್ರಿಯ
-
ರಾಮದಾಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
-
ಸಂಚಿನ ಹಿಂದಿರುವವರ ಪತ್ತೆಗೆ ತನಿಖೆ ಮುಂದುವರಿಕೆ
ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದು, ಭಯೋತ್ಪಾದಕ ಸಂಚಿನ ವೇಳೆ ವಶಪಡಿಸಿಕೊಂಡ ಸ್ಫೋಟಕವನ್ನು ಬಾಂಬ್ ನಿಷ್ಕ್ರಿಯ ದಳವು ಭದ್ರತಾ ನಿಯಮಾವಳಿಗಳಂತೆ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ ಎಂದು ತಿಳಿಸಿದ್ದಾರೆ.
ಮಧ್ಯರಾತ್ರಿ ಗಸ್ತಿನ ವೇಳೆ ಪತ್ತೆಯಾದ ಐಇಡಿ
ಆಗಸ್ಟ್ 15 ಮತ್ತು 16ರ ಮಧ್ಯರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಗಗ್ಗೋಮಹಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ ಕುಲೀರ್ ಸಿಂಗ್ ಅವರಿಗೆ ಕಪ್ಪು ಮೇಣದಿಂದ ಸುತ್ತಿದ ಅನುಮಾನಾಸ್ಪದ ಪ್ಯಾಕೆಟ್ ಕಂಡು ಬಂದಿದೆ. ಈ ಕುರಿತಂತೆ ಅನುಮಾನಗೊಂಡು ಅದನ್ನು ಪರಿಶೀಲಿಸಿದಾಗ ಅದರೊಳಗೆ IED, ಡಿಟೋನೇಟರ್, ಬ್ಯಾಟರಿ ಮತ್ತು ಟೈಮರ್ ಇರುವುದನ್ನು ಪೊಲೀಸರು ಪತ್ತೆಹಚ್ಚಿದರು.
ತಕ್ಷಣವೇ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ಸ್ಫೋಟಕವನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಯಿತು. ಉಳಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲು, ತನಿಖೆ ತೀವ್ರ
ಅಮೃತಸರ ಗ್ರಾಮೀಣ ಪ್ರದೇಶದ ರಾಮದಾಸ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ಸಂಚಿನ ಹಿಂದಿರುವ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸಲು ತನಿಖೆ ಮುಂದುವರಿದಿದೆ.
ಡಿಜಿಪಿ ಗೌರವ್ ಯಾದವ್ ಅವರ ಪ್ರಕಾರ, ರಾಷ್ಟ್ರವಿರೋಧಿ ಶಕ್ತಿಗಳ ಯೋಜನೆಯನ್ನು ವಿಫಲಗೊಳಿಸುವ ಮೂಲಕ ಸಾರ್ವಜನಿಕ ಸುರಕ್ಷತೆಗೆ ಎದುರಾಗಬಹುದಾದ ದೊಡ್ಡ ಅಪಾಯವನ್ನು ಪೊಲೀಸರು ತಪ್ಪಿಸಿದ್ದಾರೆ.



