ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ‘ಬೆಂಗಳೂರು ನಡಿಗೆ’ ಭಾಗವಾಗಿ ಜೆಪಿ ಪಾರ್ಕ್ಗೆ ಭೇಟಿ ನೀಡಿ, ವಾಯುವಿಹಾರ ಮಾಡಿದರು. ಅಲ್ಲಿ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಈ ಸಮಯದಲ್ಲಿ, ಬಿಜೆಪಿ ಶಾಸಕ ಮುನಿರತ್ನ ಅವರು ಆರ್ಎಸ್ಎಸ್ ಗಣವೇಷಧಾರಿಯಾಗಿ ಪಾರ್ಕ್ಗೆ ಆಗಮಿಸಿ, ಸಭಿಕರ ಸಾಲಿನಲ್ಲಿ ಕುಳಿತರು. ಈ ವೇಳೆ ಡಿಕೆ ಶಿವಕುಮಾರ್ ಅವರು “ಕರಿ ಟೋಪಿ ಶಾಸಕರೇ ಬನ್ನಿ ಮೇಲೆ” ಎಂದು ಕರೆದು ವೇದಿಕೆಗೆ ಆಹ್ವಾನಿಸಿದರು.
ವೇದಿಕೆಗೆ ಬಂದ ಮುನಿರತ್ನ ಅವರು ಮೈಕ್ ಪಡೆದುಕೊಂಡು, ಸ್ಥಳೀಯ ಶಾಸಕನಾಗಿ ತಮಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರದಿದ್ದುದನ್ನು ಟೀಕಿಸಿದರು. ಇದು ಸರ್ಕಾರದ ಕಾರ್ಯಕ್ರಮವೇ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೇ ಎಂದು ಪ್ರಶ್ನಿಸಿದರು . ಮುನಿರತ್ನ ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ವೇದಿಕೆಯಲ್ಲಿ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆಯಿತು.
ಇದರಿಂದ ಉದ್ಭವಿಸಿದ ಗೊಂದಲದ ನಡುವೆ, ಪೊಲೀಸರು ಮುನಿರತ್ನ ಅವರನ್ನು ವೇದಿಕೆಯಿಂದ ಹೊರಗೆ ಕರೆದೊಯ್ದರು . ಘಟನೆಯ ನಂತರ ಡಿಕೆ ಶಿವಕುಮಾರ್ ಅವರು ಇದು ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮವಾಗಿತ್ತು, ರಾಜಕೀಯಕ್ಕೆ ಅವಕಾಶ ಕೊಡಬಾರದಿತ್ತು ಎಂದು ಸೂಚಿಸಿದರು





