ಅಪ್ರಾಪ್ತ ಬಾಲಕಿ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ಬೆನ್ನಲ್ಲೇ ದೆಹಲಿ ಸರ್ಕಾರ ಬಸ್ಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ದೆಹಲಿಯಲ್ಲಿ ಸಂಚರಿಸುವ ಎಲ್ಲಾ ಬಸ್ಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಸಾಧನಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಎಂದು ಸಾರಿಗೆ ಇಲಾಖೆ ಹೊಸ ನಿರ್ದೇಶನ ಹೊರಡಿಸಿದೆ.
ಹೊಸ ನಿಯಮದಂತೆ ಬಸ್ಗಳ ಕಿಟಕಿಗಳಿಗೆ ಪರದೆಗಳನ್ನು ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಸ್ನ ಒಳಗೆ ಮತ್ತು ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುವಂತಿರಬೇಕು. ಮುಂಭಾಗ, ಹಿಂಭಾಗ ಹಾಗೂ ಬದಿಯ ಕಿಟಕಿಗಳ ಗಾಜಿನ ಪಾರದರ್ಶಕತೆಗೆ ಸಂಬಂಧಿಸಿದ ನಿಗದಿತ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಸೂಚಿಸಿದೆ.
ಇತ್ತೀಚೆಗೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ರನ್ನು ಬಂಧಿಸಲಾಗಿದೆ. ಬಾಲಕಿ ಪ್ರಯಾಣಿಸುತ್ತಿದ್ದ ವೇಳೆ ಬಸ್ನ ಕಿಟಕಿಗಳಿಗೆ ಪರದೆ ಹಾಕಲಾಗಿತ್ತು. ಇದರಿಂದ ಒಳಗಿನ ಚಟುವಟಿಕೆಗಳು ಹೊರಗಿನಿಂದ ಕಾಣದಂತಾಗಿದ್ದವು ಎನ್ನಲಾಗಿದೆ. ಕಾನೂನಿನ ಪ್ರಕಾರ ಇರಬೇಕಾದ ಸಿಸಿಟಿವಿ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ.
ಆಗಸ್ಟ್ 4ರ ರಾತ್ರಿ ಘಟನೆ ನಡೆದಿದ್ದು, ಕೃತ್ಯದ ಬಳಿಕ ಆರೋಪಿಗಳು ಬಾಲಕಿಯನ್ನು ಕಾಶ್ಮೀರಿ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಗ್ರೇಟರ್ ನೋಯ್ಡಾದಿಂದ ಬಸ್ ಹತ್ತಿದ್ದಳು ಎನ್ನಲಾಗಿದ್ದು, ಅಲ್ಲಿಂದ 40 ಕಿಲೋಮೀಟರ್ಗೂ ಹೆಚ್ಚು ದೂರದಲ್ಲಿರುವ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು.
ಪ್ರತಿ ಬಸ್ನಲ್ಲಿರುವ ಪ್ಯಾನಿಕ್ ಬಟನ್ಗಳು ಪ್ರಯಾಣಿಕರಿಗೆ ಸುಲಭವಾಗಿ ತಲುಪುವ ಸ್ಥಳದಲ್ಲಿರಬೇಕು. ವಾಹನ ಟ್ರ್ಯಾಕಿಂಗ್ ಸಾಧನಗಳೂ ಸದಾ ಸಕ್ರಿಯವಾಗಿರಬೇಕು. ಇದರ ಜೊತೆಗೆ ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಾಧನ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಇರಬೇಕು ಎಂದು ನಿರ್ದೇಶಿಸಲಾಗಿದೆ.
ರಾತ್ರಿ ವೇಳೆ ಅಥವಾ ಬಸ್ ಸಂಚಾರದಲ್ಲಿಲ್ಲದ ಸಂದರ್ಭದಲ್ಲಿ ವಾಹನಗಳನ್ನು ಸುರಕ್ಷಿತ, ಅಧಿಕೃತ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲೇ ನಿಲ್ಲಿಸಬೇಕು. ಬಸ್ಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲ್ಲಿಸುವಂತಿಲ್ಲ. ಪ್ರಯಾಣಿಕರು ಹತ್ತುವುದು ಮತ್ತು ಇಳಿಯುವುದು ನಿಗದಿತ ಬಸ್ ನಿಲ್ದಾಣ ಅಥವಾ ಅಧಿಕೃತ ಸ್ಥಳಗಳಲ್ಲೇ ನಡೆಯಬೇಕು. ರಸ್ತೆ ಮಧ್ಯೆ, ಜಂಕ್ಷನ್ಗಳಲ್ಲಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ಬಸ್ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.
ಚಾಲಕರು ಮತ್ತು ಕಂಡಕ್ಟರ್ಗಳು ಮಾನ್ಯ ಪರವಾನಗಿ, ಸಮವಸ್ತ್ರ ಹಾಗೂ ಅನ್ವಯಿಸುವಲ್ಲಿ ಪಿಎಸ್ವಿ ಬ್ಯಾಡ್ಜ್ ಹೊಂದಿರಬೇಕು. ಮದ್ಯ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿರುವಾಗ ವಾಹನ ಚಲಾಯಿಸುವುದಕ್ಕೂ ಸಂಪೂರ್ಣ ನಿಷೇಧವಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೂ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳೆಯರಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ಅಪರಾಧ ನಡೆಯುತ್ತಿರುವುದು ಕಂಡುಬಂದರೆ ಬಸ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಬಸ್ ಅನ್ನು ಸಮೀಪದ ಪೊಲೀಸ್ ಠಾಣೆ, ಪೊಲೀಸ್ ಪೋಸ್ಟ್ ಅಥವಾ ಪಿಸಿಆರ್ ವಾಹನದ ಬಳಿ ಕರೆದೊಯ್ಯಬೇಕು ಎಂದು ಸೂಚಿಸಲಾಗಿದೆ.
ಪ್ರತಿ ಬಸ್ ಮಾನ್ಯ ಫಿಟ್ನೆಸ್ ಮತ್ತು ಪಿಯುಸಿ ಪ್ರಮಾಣಪತ್ರ ಹೊಂದಿರಬೇಕು. ನಿಯಮ ಉಲ್ಲಂಘಿಸಿದರೆ ದಂಡ, ವಾಹನ ವಶಕ್ಕೆ ಪಡೆಯುವುದು, ಸೀಜ್ ಮಾಡುವುದು ಅಥವಾ ಪರವಾನಗಿ/ಪರ್ಮಿಟ್ ಅಮಾನತು ಹಾಗೂ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್, ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ನಿಗದಿತ ಸುರಕ್ಷತಾ ಹಾಗೂ ಕಾರ್ಯಾಚರಣಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.





