ಚಿಕ್ಕಮಗಳೂರು: ದೈವಾರಾಧನೆ ಹಾಗೂ ಭೂತ, ಪ್ರೇತ ಬಿಡಿಸುವ ಹೆಸರಿನಲ್ಲಿ ಯುವತಿಯೊಬ್ಬಳಿಗೆ ಅಮಾನವೀಯವಾಗಿ ಕಿರುಕುಳ ನೀಡಿದ ಆರೋಪ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಕೇಳಿಬಂದಿದೆ. ಸತೀಶ್ ಪಾತ್ರಿ ಎಂಬಾತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಗೆ ಸಂಬಂಧಿಸಿದೆ ಎನ್ನಲಾದ ವಿಡಿಯೋ ಹಾಗೂ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವೈರಲ್ ದೃಶ್ಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆರೋಪದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸತೀಶ್ ಪಾತ್ರಿ ಯುವತಿಯೊಬ್ಬಳನ್ನು ಹಿಡಿದುಕೊಂಡು ಹೆದರಿಸುತ್ತಿರುವ ದೃಶ್ಯ ಕಂಡುಬರುತ್ತದೆ ಎಂದು ಆರೋಪಿಸಲಾಗಿದೆ. ಕೋಳಿಯನ್ನು ನೀಡಿ ಅದರ ರಕ್ತ ಕುಡಿಯುವಂತೆ ಒತ್ತಾಯಿಸುತ್ತಿರುವುದು ಹಾಗೂ ಅದನ್ನು ಸ್ವೀಕರಿಸದಿದ್ದರೆ ಬಾಯಿಯಲ್ಲಿ ಉರಿಯುವ ಕರ್ಪೂರ ಇಡುವುದಾಗಿ ಬೆದರಿಕೆ ಹಾಕುತ್ತಿರುವ ದೃಶ್ಯಗಳಿವೆ ಎನ್ನಲಾಗಿದೆ.
ಇದರ ಜತೆಗೆ ಬಾಳೆ ಎಲೆಯ ಮೇಲೆ ಇಟ್ಟಿರುವ ಅವಲಕ್ಕಿಯನ್ನು ಸಂಪೂರ್ಣವಾಗಿ ತಿನ್ನುವಂತೆ ಯುವತಿಗೆ ಸೂಚಿಸುವ ದೃಶ್ಯವೂ ವಿಡಿಯೋದಲ್ಲಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗ್ರಾಮಸ್ಥರಿಂದ ಕಠಿಣ ಕ್ರಮಕ್ಕೆ ಆಗ್ರಹ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ. ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂಬ ಆರೋಪಗಳನ್ನು ಕೆಲವರು ಮಾಡಿದ್ದಾರೆ.
ಸ್ಥಳೀಯ ಮುಖಂಡ ತಮ್ಮಣ್ಣಶೆಟ್ಟಿ ಸೇರಿದಂತೆ ಗ್ರಾಮಸ್ಥರು ಸತೀಶ್ ಪಾತ್ರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿಗೆ ಹಿಂಸೆ ನೀಡಿರುವ ಆರೋಪದ ಕುರಿತು ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕು ಎಂದು ಆಗ್ರಹಿಸಲಾಗಿದೆ.
ಸತೀಶ್ ಪಾತ್ರಿ ಸ್ಪಷ್ಟನೆ ಏನು?
ಇತ್ತ, ಆರೋಪಗಳು ಹಾಗೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸತೀಶ್ ಪಾತ್ರಿ ಮಾಧ್ಯಮಗಳ ಮುಂದೆ ಬಂದು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ವೈರಲ್ ಆಗಿರುವ ವಿಡಿಯೋ ಸುಮಾರು ಮೂರು ವರ್ಷಗಳಷ್ಟು ಹಳೆಯದು ಎಂದು ಅವರು ಹೇಳಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ತಾವು ಯಾವುದೇ ದರ್ಶನ ಸೇವೆಯನ್ನು ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ದೇವಾಲಯದ ಹಳೆಯ ಧರ್ಮದರ್ಶಿಯೇ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಳೆಯ ವಿಡಿಯೋಗಳನ್ನು ಬಳಸಿಕೊಂಡು ತಮ್ಮ ತೇಜೋವಧೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸತೀಶ್ ಪಾತ್ರಿ ಸಮಜಾಯಿಷಿ ನೀಡಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಹಾಗೂ ಅದರ ಹಿಂದಿನ ಸಂಪೂರ್ಣ ವಿಚಾರವನ್ನು ತನಿಖೆ ನಡೆಸಿದ ಬಳಿಕವೇ ನಿಜಾಂಶ ಹೊರಬರಬೇಕಿದೆ.
ಸತೀಶ್ ಪಾತ್ರಿ ಅವರೊಂದಿಗೆ ಸಂಬಂಧ ಹೊಂದಿದೆ ಎನ್ನಲಾದ ದೇವಾಲಯ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. ದೇವಾಲಯದಲ್ಲಿ ದುರ್ಗಾಪರಮೇಶ್ವರಿ ಹಾಗೂ ಪಂಜುರ್ಲಿ ಸೇರಿದಂತೆ ಕರಾವಳಿ ಭಾಗದಲ್ಲಿ ಆರಾಧಿಸಲ್ಪಡುವ ದೈವಗಳನ್ನು ಪ್ರತಿಷ್ಠಾಪಿಸಲಾಗಿದೆ ಎನ್ನಲಾಗಿದೆ.





