ಬೀದರ್: ರಾಜ್ಯಾದ್ಯಂತ ನಡೆದ ಸಿಇಟಿ (CET) ಪರೀಕ್ಷೆಯ ಸಂದರ್ಭದಲ್ಲಿ, ಶಿವಮೊಗ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ (ಜಂಟು) ತೆಗೆಸಿ ಪರೀಕ್ಷೆಗೆ ಅವಕಾಶ ನೀಡದ ಘಟನೆ ತೀವ್ರ ವಿವಾದವಾಗಿತ್ತು. ಈ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ್ ಬಿರಾದಾರ್ ಮತ್ತು ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಘಟನೆಯೊಂದರ ಸಂಬಂಧ ಸಿಇಟಿ ಪರೀಕ್ಷಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಜನಿವಾರ ಹಾಗೂ ಕೈಗೆ ಕಟ್ಟಿದ್ದ ಧಾರವನ್ನು ತೆಗೆದು ಕಸದ ಬಟ್ಟಿಗೆ ಎಸೆದಿದ್ದಾರಂತೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಬೀದರ್ನ ಘಟನೆಯೂ ಬೆಳಕಿಗೆ ಬಂದಿದೆ.
ಬೀದರ್ನ ಸಾಯಿ ಸ್ಪೂರ್ತಿ ಪದವಿಪೂರ್ವ ಖಾಸಗಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬನು ಜನಿವಾರ ಹಾಕಿದ್ದಾನೆ ಎಂಬ ಕಾರಣಕ್ಕೆ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ವಿಷಯ ಗಂಭೀರ ಸ್ವರೂಪ ಪಡೆದಿದ್ದು, ಜಿಲ್ಲಾ ಆಡಳಿತ ಕೂಡ ಕ್ರಮಕ್ಕೆ ಮುಂದಾಗಿದೆ.
ಈ ಕುರಿತು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ವರದಿ ಸಲ್ಲಿಸಿದರು. ವರದಿಯಲ್ಲಿ, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವೀಕ್ಷಕರು ಹಾಗೂ ಪ್ರಾಂಶುಪಾಲರ ನಿರ್ಲಕ್ಷ್ಯವನ್ನು ಉಲ್ಲೇಖಿಸಲಾಗಿದೆ. ಉಪವಿಭಾಗಾಧಿಕಾರಿ ಮೋದ್ದಶೀರ್ ಅವರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲವೆಂಬುದಾಗಿ ವರದಿ ಹೇಳುತ್ತದೆ.
ಈ ವರದಿಯ ಆಧಾರದ ಮೇಲೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್ ಅವರ ಆದೇಶದಂತೆ ಸಾಯಿ ಸ್ಪೂರ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಬಿರಾದಾರ ಮತ್ತು ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
ಸಿಇಟಿ ಪರೀಕ್ಷೆಗಳ ಸಂದರ್ಭದಲ್ಲಿ ಧಾರ್ಮಿಕ ಗುರುತುಗಳನ್ನು ಧರಿಸುವ ಕುರಿತಾಗಿ ಯಾವುದೇ ಸ್ಪಷ್ಟ ನಿಯಮವಿಲ್ಲದಿದ್ದರೂ, ಕೆಲವು ಸಿಬ್ಬಂದಿಗಳ ವೈಯಕ್ತಿಕ ಆಧಾರದ ನಿರ್ಧಾರಗಳು ಇಂತಹ ತೊಂದರೆಗಳಿಗೆ ಕಾರಣವಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಘಟನೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ತಕ್ಷಣದ ಗಮನಸೆಳೆದಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಆರಂಭಿಸಿದೆ. ಇದು ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಬ್ರಾಹ್ಮಣ ಮಹಾಸಭೆ ಸೇರಿದಂತೆ ಹಲವಾರು ಸಂಘಟನೆಗಳು ಈ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಧಾರ್ಮಿಕ ಗುರುತಿನ ಆಧಾರದ ಮೇಲೆ ವ್ಯತ್ಯಾಸ ಮಾಡುವುದು ಸಂವಿಧಾನಬಾಹಿರ ಎಂಬ ತೀರ್ಮಾನವನ್ನು ಮುಂದಿಟ್ಟಿವೆ. ಈ ಮಧ್ಯೆ, ಕೆಇಎ ಮತ್ತು ಶಿಕ್ಷಣ ಇಲಾಖೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸ್ಪಷ್ಟ ಮಾರ್ಗಸೂಚಿ ರೂಪಿಸಲು ಚಿಂತನೆ ನಡೆಸುತ್ತಿದೆ.





