ಬೆಂಗಳೂರು: ಜಾತಿ ಗಣತಿ ವರದಿ ಕುರಿತಾಗಿ ರಾಜ್ಯ ಸಚಿವ ಸಂಪುಟ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನಕ್ಕೆ ಬರಲು ನಿರ್ಣಯ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ವಿಷಯವು ಪ್ರಮುಖ ಚರ್ಚೆಯಾಗಿತ್ತು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದನಿಗೂಡಿಸಿದರು.
ಲಿಂಗಾಯತ ಮತ್ತು ಒಕ್ಕಲಿಗ ಸಚಿವರು ತಮ್ಮ ಸಮುದಾಯಗಳ ಜನಸಂಖ್ಯೆಯ ಅಂಕಿಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಸಚಿವರು, “ನಮ್ಮ ಸಮುದಾಯ ಶೇಕಡಾ 11ರಷ್ಟು ಇಲ್ಲ, ಉಪಪಂಗಡಗಳನ್ನು ಸೇರಿಸಿದರೆ ಶೇಕಡಾ 22 ಆಗುತ್ತದೆ” ಎಂದು ಏರುಧ್ವನಿಯಲ್ಲಿ ವಾದಿಸಿದರು.
ಸಚಿವ ಸಂತೋಷ್ ಲಾಡ್ ಅವರು, “ಗಣತಿಯಲ್ಲಿ ಲೋಪಗಳಿದ್ದರೆ ಸರಿಪಡಿಸೋಣ” ಎಂದು ಸಲಹೆ ನೀಡಿದರಾದರೂ, ಆದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಚಾಮರಾಜನಗರದಲ್ಲಿ ಅಂತಿಮ ತೀರ್ಮಾನ?
ಜಾತಿಗಣತಿಯ ವಿವಾದವನ್ನು ಬಗೆಹರಿಸಲು ಸರ್ಕಾರವು ಈ ತಿಂಗಳ 24ರಂದು ಚಾಮರಾಜನಗರದ ಮಾದಪ್ಪನ ಸನ್ನಿಧಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಎಲ್ಲಾ ಸಚಿವರ ಸಲಹೆಯನ್ನು ಪಡೆದು ಜಾತಿಗಣತಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. “ಮಹದೇಶ್ವರ ಬೆಟ್ಟದಲ್ಲಿ ಜಾತಿಯ ಜ್ವಾಲೆ ತಣ್ಣಗಾಗುತ್ತದೆಯೇ?” ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಮೇ 2ರಂದು ನಡೆಯುವ ಸಚಿವ ಸಂಪುಟ ಸಭೆಯ ಬಳಿಕ ಜಾತಿಗಣತಿಯ ನಿರ್ಧಾರ ಎಂದು ಸಚಿವ ಹೆಚ್. ಕೆ ಪಾಟೀಲ್ ಹೇಳಿದ್ದಾರೆ.