ಬೆಂಗಳೂರು, ಜೂನ್ 13: ಕರ್ನಾಟಕದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣದಲ್ಲಿ ಸಂಪೂರ್ಣ ಬದಲಾವಣೆ ಕಂಡುಬಂದಿದೆ. ಇಂದು ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಾರ್ವಜನಿಕರ ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದಿಢೀರ್ ಆರ್ಭಟಿಸಿದ ವರುಣನಿಗೆ ವಾಹನ ಸವಾರರು ಪರದಾಡಿದರು.
ಎಲ್ಲೆಲ್ಲಿ ಮಳೆ?
ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ವಿಲ್ಸನ್ ಗಾರ್ಡನ್, ಕೆ.ಆರ್. ಮಾರ್ಕೆಟ್, ಜಯನಗರ, ಜೆ.ಪಿ. ನಗರ, ಶಿವಾನಂದ ಸರ್ಕಲ್, ಗಾಂಧಿನಗರ ಬಜಾರ್, ಲಾಲ್ ಬಾಗ್, ಚಿಕ್ಕಪೇಟೆ ಮತ್ತು ಮಲ್ಲೇಶ್ವರಂ ಸೇರಿದಂತೆ ನಗರದಾದ್ಯಂತ ಮಳೆರಾಯ ತನ್ನ ರೌದ್ರಾವತಾರ ತೋರಿದ್ದಾನೆ. ಮೆಜೆಸ್ಟಿಕ್ ಮತ್ತು ಕೋರಮಂಗಲ ಪ್ರದೇಶಗಳಲ್ಲಿ ಮಳೆಯ ಹೆಚ್ಚಾಗಿದೆ.
ಸಂಚಾರ ಸ್ಥಗಿತ: ರಸ್ತೆಗಳಲ್ಲಿ ನದಿಯಂತೆ ನೀರು
ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ಗಾಂಧಿ ಬಜಾರ್ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಗಂಟೆಗಟ್ಟಲೆ ನಿಂತುಹೋದವು. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ತಮ್ಮ ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿ, ಫ್ಲೈಓವರ್ಗಳ ಕೆಳಗೆ ಮತ್ತು ಬಸ್ ನಿಲ್ದಾಣಗಳಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಯಿತು. ಹಲವು ಕಡೆ ಚರಂಡಿಗಳು ತುಂಬಿ ಹರಿಯುತ್ತಿರುವುದರಿಂದ ರಸ್ತೆಗಳಲ್ಲಿ ನೀರು ನಿಂತಿದೆ.
ನಿನ್ನೆ ರಾತ್ರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನದಿಯಂತೆ ಹರಿದ ನೀರು
ಶುಕ್ರವಾರ ತಡರಾತ್ರಿಯೂ ನಗರದಲ್ಲಿ ಮಳೆ ಮುಂದುವರಿದಿತ್ತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರು-ಹೊಸೂರು ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಆ ರಸ್ತೆಯಲ್ಲಿ ನೀರು ನದಿಯಂತೆ ಹರಿದುಹೋಗುತ್ತಿತ್ತು. ಹೆಣ್ಣೂರು-ಬಾಗಲೂರು ರಸ್ತೆಯೂ ಸಹ ಜಲಾವೃತವಾಗಿ, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನ್ಯೂ ಏರ್ಪೋರ್ಟ್ ರಸ್ತೆಯಲ್ಲೂ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ನಿಂತುಹೋಗಿದ್ದವು.
ರಾಮನಗರದಲ್ಲೂ ಮಳೆಯ ಆರ್ಭಟ: ರೈತರಲ್ಲಿ ಮಂದಹಾಸ
ಬೆಂಗಳೂರು ದಕ್ಷಿಣ ಜಿಲ್ಲೆಯ ರೇಷ್ಮೆನಗರಿ ರಾಮನಗರದಲ್ಲೂ ಅರ್ಧಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ. ಅಲ್ಲಿನ ಜನಜೀವನವೂ ಅಸ್ತವ್ಯಸ್ತಗೊಂಡಿತ್ತು. ಆದರೆ ಈ ಮಳೆಯಿಂದ ರೈತರ ಮೊಗದಲ್ಲಿ ಸ್ವಲ್ಪ ಮಂದಹಾಸ ಮೂಡಿದೆ. ಬಿತ್ತನೆಗಾಗಿ ಕಾತರದಿಂದ ಕಾಯುತ್ತಿದ್ದ ರೈತರಿಗೆ ಮಳೆ ವರದಾನವಾಗಿದೆ.





