ಬೆಂಗಳೂರು, (ಜು.31): ಮಳೆ ಕೊರತೆಯಿಂದ ಯಾವುದೇ ಗ್ರಾಮೀಣ ಜನತೆ ಗುಳೆ ಹೋಗದಂತೆ ತಡೆಯಲು, ಇರುವ ಸ್ಥಳದಲ್ಲೇ ವಿಬಿಜಿ ರಾಮ್ ಜಿಯಡಿ ಉದ್ಯೋಗ ನೀಡಲು ಕ್ರಮ ವಹಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಜಿ.ಪಂ. ಸಿಇಓಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಮುಖ್ಯ ಕಾರ್ಯದರ್ಶಿ, ಇಲಾಖೆಯ ಕಾರ್ಯದರ್ಶಿ ಮತ್ತು ಎಲ್ಲ ಜಿಲ್ಲೆಗಳ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಿಇಓಗಳ ಸಭೆ ನಡೆಸಿದ ಅವರು, ಜುಲೈ 1ರಿಂದ ಮಾರ್ಚ್ 31ರವರೆಗೆ 9 ತಿಂಗಳ ಅವಧಿಗೆ ಕೇಂದ್ರ ಸರ್ಕಾರ 5709 ಕೋಟಿ ರೂ. ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರ 3806 ಕೋಟಿ ರೂ. ಭರಿಸುತ್ತಿದೆ. ಅಂದರೆ ಒಟ್ಟು 9515 ಕೋಟಿ ರೂ. ನಮಗೆ 9 ತಿಂಗಳಿಗೆ ಲಭ್ಯವಿದೆ. ಈ 9 ತಿಂಗಳಲ್ಲಿ ವಿಬಿಜಿ ರಾಮ್ ಜಿ ಅಡಿ ಪ್ರತಿ ತಿಂಗಳೂ 5 ಲಕ್ಷ ಜನರಿಗೆ ಉದ್ಯೋಗ ನೀಡಲು ಅವಕಾಶವಿದೆ. ಆದರೆ ಜುಲೈ ತಿಂಗಳಲ್ಲಿ ಪ್ರಗತಿ ಆಶಾದಾಯಕವಾಗಿಲ್ಲ. ಆಗಸ್ಟ್ ನಿಂದ ಸಮರೋಪಾದಿಯಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಂಡು, ಶಾಶ್ವತ ಆಸ್ತಿಯನ್ನು ಸೃಷ್ಟಿಸಬೇಕು, ಗ್ರಾಮೀಣ ಭೂ ರಹಿತ ಕೂಲಿ ಕಾರ್ಮಿಕರಿಗೆ, ಬಡವರಿಗೆ ಉದ್ಯೋಗ ನೀಡಿ ಗುಳೆ ತಡೆಯಬೇಕು ಎಂದು ಈಶ್ವರ ಖಂಡ್ರೆ ನಿರ್ದೇಶನ ನೀಡಿದರು.
ಉದ್ಯೋಗ ಕೇಳಿದರೂ ಪಂಚಾಯತಿಗಳಲ್ಲಿ ಕೆಲಸ ಕೊಡುತ್ತಿಲ್ಲ ಎಂಬ ಆರೋಪ ಬಾರದಂತೆ ಸಿಇಓಗಳು ಕ್ರಮ ವಹಿಸಬೇಕು, ಕೆಲಸ ಮಾಡದೆ ನಕಲಿ ಬಿಲ್ ನೀಡಿ ಹಣ ಪಡೆದರೆ, ಕಳಪೆ ಕಾಮಗಾರಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ತಾಲೂಕು ಕಾರ್ಯನಿರ್ವಹಣಾಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಸೂಚಿಸಿದರು.
ವಿಬಿಜಿ ರಾಮ್ ಜಿ ಅಡಿಯಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ತಿಗೆ, ಹೊಸ ಕೊಠಡಿಗಳು ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶವಿದ್ದು, ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಉದ್ಯೋಗದ ಕಾರ್ಡ್ ರದ್ದಾಗಿರುವ ಅರ್ಹರಿಗೆ ಉದ್ಯೋಗದ ಕಾರ್ಡ್ ನೀಡಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಚೇತನರಿಗೆ, ಮಹಿಳಾ ನೇತೃತ್ವದಲ್ಲಿ ಮನೆ ನಿರ್ವಹಣೆ ಮಾಡುತ್ತಿರುವವರಿಗೆ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಡವರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡಲು ಸೂಚಿಸಿದ ಈಶ್ವರ ಖಂಡ್ರೆ, ಉದ್ಯೋಗ ನೀಡಿಕೆ ಮತ್ತು ಆಸ್ತಿ ಸೃಜನೆಯಲ್ಲಿ ಹಿಂದೆ ಬಿದ್ದಿರುವ, ವಿವಿಧ ಜಿಲ್ಲೆಗಳ ಸಿಇಓಗಳಿಗೆ ಎಚ್ಚರಿಕೆ ನೀಡಿ, ಕೂಡಲೇ ಗ್ರಾಮ ಸಭೆ ನಡೆಸಲು, ಕಾಮಗಾರಿಗೆ ಅನುಮೋದನೆ ನೀಡಲು ತುರ್ತು ಕ್ರಮ ವಹಿಸಿ, ಹೆಚ್ಚು ಶ್ರಮವಹಿಸಿ ಫಲಿತಾಂಶ ಸಕಾರಾತ್ಮಕವಾಗಿರಬೇಕು ಎಂದರು.
ರಾಜ್ಯದಲ್ಲಿ ಭೂಸ್ವಾಧೀನ ಆಗಿರುವ ಸಾವಿರಾರು ಎಕರೆ ಭೂಮಿ ಉಪಯೋಗಕ್ಕೆ ಬಾರದೆ ಹಾಗೇ ಇದ್ದು, ಈ ಜಮೀನಿನಲ್ಲಿ ಸಮುದಾಯ ಕಾಮಗಾರಿಯಡಿಯಲ್ಲಿ ತಾತ್ಕಾಲಿಕವಾಗಿ ಹಸಿ ಮೇವು ಬೆಳೆಯಲು ಕ್ರಮ ವಹಿಸಿದರೆ, ಕೊಳವೆ ಬಾವಿ ಮರು ಪೂರಣಕ್ಕೆ ಕ್ರಮ ವಹಿಸಿದರೆ ಬರ ನಿರ್ವಹಣೆಗೆ ನೆರವಾಗುತ್ತದೆ, ಜಾನುವಾರುಗಳಿಗೆ ಮೇವು ದೊರೆಯುತ್ತದೆ. ಎಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲವೋ ಅಲ್ಲಿ ಖಾಸಗಿ ಜಮೀನನ್ನು ಗುತ್ತಿಗೆಗೆ ಪಡೆದು ಮೇವು ಬೆಳೆಸಬಹುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಧ್ಯ ಪ್ರವೇಶಿಸಿ, ಮೀನುಗಾರಿಕೆ ಶೆಡ್, ಕೊಟ್ಟಿಗೆ, ಕುರಿಗಳ ಶೆಡ್ ಇತ್ಯಾದಿ ನಿರ್ಮಾಣಕ್ಕೆ ಕೂಡ ಅವಕಾಶವಿದ್ದು, ಪಶುಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಅದೇ ರೀತಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಸಹಯೋಗದಲ್ಲಿ ಮೆವು ಬೆಳೆಸಲು ಕ್ರಮ ವಹಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಆಯುಕ್ತರಾದ ದಿವ್ಯ ಪ್ರಭು ಹಾಗೂ ಜಿಲ್ಲಾ ಕಾರ್ಯದರ್ಶಿಗಳು, ಸಿಇಓಗಳು ಪಾಲ್ಗೊಂಡಿದ್ದರು.





