ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೆ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಪುಟಾಣಿ ಮಕ್ಕಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ
ಜೆ.ಜೆ. ನಗರದ ವಿ.ಎಸ್. ಗಾರ್ಡನ್ ಬಳಿ ಇರುವ ಪ್ರಸಿದ್ಧ ಓಂ ಶಕ್ತಿ ದೇವಸ್ಥಾನದ ಬಳಿ ಈ ಅಹಿತಕರ ಘಟನೆ ಸಂಭವಿಸಿದೆ. ಭಕ್ತರು ಮತ್ತು ಓಂ ಶಕ್ತಿ ಮಾಲಾಧಾರಿಗಳು ಸೇರಿ ದೇವಿಯ ತೇರನ್ನು (ರಥ) ಅತ್ಯಂತ ಭಕ್ತಿಯಿಂದ ಎಳೆಯುತ್ತಿದ್ದರು. ರಥೋತ್ಸವದ ಸಂಭ್ರಮದಲ್ಲಿದ್ದ ಭಕ್ತರ ಮೇಲೆ ಹಠಾತ್ತನೆ ಕಲ್ಲುಗಳು ಬೀಳಲಾರಂಭಿಸಿವೆ. ಅನ್ಯ ಕೋಮಿನ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳದಲ್ಲಿದ್ದ ಮಾಲಾಧಾರಿಗಳು ಗಂಭೀರವಾಗಿ ಆರೋಪಿಸಿದ್ದಾರೆ.
ಮಕ್ಕಳಿಗೆ ಗಾಯ: ಜನರ ಆಕ್ರೋಶ
ಈ ಕಲ್ಲು ತೂರಾಟದ ಪರಿಣಾಮವಾಗಿ ಮಾಲೆ ಧರಿಸಿದ್ದ ಇಬ್ಬರು ಮಕ್ಕಳಿಗೆ ಕಲ್ಲಿನೇಟು ಬಿದ್ದಿದೆ. ತೇರಿನ ಮೇಲಿದ್ದ ಪುಟಾಣಿ ಮಗುವಿಗೆ ಗಾಯವಾಗಿದ್ದು, ಪೋಷಕರು ಮತ್ತು ಭಕ್ತರು ಕಂಗಾಲಾಗಿದ್ದಾರೆ. ಭಕ್ತಿಯಿಂದ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಈ ರೀತಿ ವಿಘ್ನ ಉಂಟುಮಾಡಿದ ಕಿಡಿಗೇಡಿಗಳ ವಿರುದ್ಧ ಜನರು ಕೆಂಡಾಮಂಡಲವಾಗಿದ್ದಾರೆ.
ಠಾಣೆಯ ಮುಂದೆ ಪ್ರತಿಭಟನೆ
ಘಟನೆ ನಡೆದ ಬೆನ್ನಲ್ಲೇ ನೂರಾರು ಮಾಲಾಧಾರಿಗಳು ಮತ್ತು ಸ್ಥಳೀಯರು ಜೆ.ಜೆ. ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಮಕ್ಕಳ ಮೇಲೆ ದಾಳಿ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಠಾಣೆಯ ಮುಂದೆ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಓಂ ಶಕ್ತಿ ಮಾಲಾಧಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಶೀಘ್ರವೇ ಆರೋಪಿಗಳನ್ನ ಬಂದಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.





