ಬೆಂಗಳೂರು : ಸಾಮಾನ್ಯವಾಗಿ ಹಸಿರು ನಗರ, ಸುಖಕರ ಹವಾಮಾನಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಇದೀಗ ಗಂಭೀರ ವಾಯು ಮಾಲಿನ್ಯದ ಸಂಕಷ್ಟಕ್ಕೆ ಸಿಲುಕುತ್ತಿದೆ. ದೆಹಲಿಯಂತಹ ತೀವ್ರ ವಾಯು ಗುಣಮಟ್ಟ ಸಮಸ್ಯೆಗಳು ಇದೀಗ ರಾಜ್ಯ ರಾಜಧಾನಿಗೂ ಕಾಲಿಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರಿನ ಗಾಳಿಯ ಗುಣಮಟ್ಟ (AQI) ಕಳೆದ ಕೆಲ ದಿನಗಳಿಂದ 170 ರಿಂದ 200ರ ಮಟ್ಟದಲ್ಲಿ ದಾಖಲಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.
ವಾಯು ಗುಣಮಟ್ಟ ಸೂಚಕ (AQI) ತಜ್ಞರ ಪ್ರಕಾರ, ಈ ಮಟ್ಟದ ಗಾಳಿಯಲ್ಲಿ ದಿನವಿಡೀ ಉಸಿರಾಟ ನಡೆಸುವುದು ದಿನಕ್ಕೆ ಸರಾಸರಿ 3.2 ಸಿಗರೇಟು ಸೇದಿದಂತೆ ಹಾನಿಕರ ಪರಿಣಾಮ ಉಂಟುಮಾಡುತ್ತದೆ. ಅಂದರೆ, ಧೂಮಪಾನ ಮಾಡದೇ ಇದ್ದರೂ ಕೇವಲ ಬೆಂಗಳೂರಿನಲ್ಲಿ ವಾಸಿಸುವುದೇ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಗಣನೀಯ ಸುಧಾರಣೆ ಕಂಡುಬಂದಿಲ್ಲ. ಈ ಅವಧಿಯಲ್ಲಿ ಕನಿಷ್ಠ AQI 78 ಆಗಿದ್ದರೆ, ಗರಿಷ್ಠ 200ರ ಮಟ್ಟವನ್ನು ತಲುಪಿದ್ದು, ಇದು ಬೆಂಗಳೂರಿನ ಇತಿಹಾಸದಲ್ಲೇ ಅಪರೂಪದ ಘಟನೆಯಾಗಿದೆ. ಇಂದಿನ ದಿನಕ್ಕೆ AQI 173ರಷ್ಟಿದ್ದರೂ ಸ್ವಲ್ಪ ಮಟ್ಟಿನ ಸುಧಾರಣೆ ಮಾತ್ರ ಕಂಡುಬಂದಿದೆ. ಆದರೆ ತಜ್ಞರು ಎಚ್ಚರಿಸುವಂತೆ, ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರು ಕೂಡ ದೆಹಲಿಯಂತೆ ತೀವ್ರ ವಾಯು ಮಾಲಿನ್ಯವನ್ನು ಎದುರಿಸಬೇಕಾದ ಸ್ಥಿತಿ ಬರಬಹುದು ಎಂದಿದ್ದಾರೆ.
ವಾಯು ಮಾಲಿನ್ಯದ ಪರಿಣಾಮವಾಗಿ ಮಕ್ಕಳು, ವೃದ್ಧರು ಹಾಗೂ ಈಗಾಗಲೇ ಉಸಿರಾಟ ಸಮಸ್ಯೆ ಇರುವವರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಶೀತ ವಾತಾವರಣದ ಜೊತೆಗೆ ಮಾಲಿನ್ಯ ಮಿಶ್ರಣವಾಗುತ್ತಿರುವುದರಿಂದ ಉಸಿರಾಟದ ತೊಂದರೆ, ಕಣ್ಣಿನ ಉರಿತ, ತಲೆನೋವು, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಭಾಗಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಉದಾಹರಣೆಗೆ, ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ 224ರ ಮಟ್ಟ ತಲುಪಿದ್ದು, ಇಂದಿಗೂ 197ರ ಮಟ್ಟದಲ್ಲಿದೆ. ಇದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಇಂದಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ PM2.5 ಪ್ರಮಾಣ 87 ಹಾಗೂ PM10 ಪ್ರಮಾಣ 113ಕ್ಕೆ ದಾಖಲಾಗಿದೆ. ಈ ಮಟ್ಟಗಳು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಸುರಕ್ಷತಾ ಮಿತಿಗಿಂತ ಬಹಳ ಹೆಚ್ಚಾಗಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು ಗಾಳಿಯ ಗುಣಮಟ್ಟ ಕುಸಿತಕ್ಕೆ ಪ್ರಮುಖ ಕಾರಣಗಳು
ಕಾಮಗಾರಿಗಳ ದೂಳು:
ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ, ಮೆಟ್ರೋ ಮತ್ತು ಕಟ್ಟಡ ಕಾಮಗಾರಿಗಳಿಂದ ಭಾರೀ ಪ್ರಮಾಣದ ಧೂಳು ವಾತಾವರಣಕ್ಕೆ ಸೇರಿದೆ. ಕಾಮಗಾರಿಗಳ ವಿಳಂಬವೂ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.
ವಾಹನ ದಟ್ಟಣೆ:
ಪ್ರತಿದಿನ 3,000 ರಿಂದ 5,000 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಎಮಿಷನ್ ಪರೀಕ್ಷೆ ಮಾಡಿಸದೇ ಸಂಚರಿಸುವ ವಾಹನಗಳು ವಾಯು ಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಚಳಿ ಮತ್ತು ಮಂಜು:
ಚಳಿಗಾಲದ ವಾತಾವರಣದಲ್ಲಿ ಮಾಲಿನ್ಯ ಕಣಗಳು ಹರಡದೇ ಒಂದೇ ಸ್ಥಳದಲ್ಲಿ ಜಮೆಯಾಗುತ್ತವೆ. ಮಂಜು ಬೀಳುವ ಸಮಯದಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕುಸಿಯುತ್ತದೆ.
ವೈದ್ಯರ ಸಲಹೆಗಳು
-
ಬೆಚ್ಚಗಿನ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು
-
ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
-
ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು
-
ಉಸಿರಾಟದ ತೊಂದರೆ, ಕೆಮ್ಮು, ಎದೆ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು





