ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಈಗ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಜೈಲಿನಲ್ಲಿರುವ ಕೈದಿಗಳನ್ನು ಕುಟುಂಬಸ್ಥರು ಭೇಟಿ ಮಾಡಲು ಸಾಮಾನ್ಯ ನಿಯಮಗಳಿದ್ದರೂ, ದರ್ಶನ್ ಈಗ ‘ಒಳ ಸಂದರ್ಶನ’ಕ್ಕೆ (In-prison Interview/Consultation) ಅವಕಾಶ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಏನಿದು ಒಳ ಸಂದರ್ಶನ ?
ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬ ಸದಸ್ಯರು ಅಥವಾ ಮಿತ್ರರನ್ನು ‘ಸಂದರ್ಶನ ಕೊಠಡಿ’ಯಲ್ಲಿ ಭೇಟಿ ಮಾಡಿಸಲಾಗುತ್ತದೆ. ಅಲ್ಲಿ ಕೈದಿ ಮತ್ತು ಭೇಟಿಗಾರರ ಮಧ್ಯೆ ಕಬ್ಬಿಣದ ಜಾಲರಿ ಅಥವಾ ಗಾಜಿನ ತಡೆ ಇರುತ್ತದೆ. ಇಬ್ಬರೂ ಪರಸ್ಪರ ಮುಟ್ಟಲು ಅಥವಾ ಹತ್ತಿರ ಕುಳಿತು ಮಾತನಾಡಲು ಅವಕಾಶವಿರುವುದಿಲ್ಲ.
ಆದರೆ, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ನಿಯಮ 570 ಮತ್ತು 574ರ ಅಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ‘ಒಳ ಸಂದರ್ಶನ’ಕ್ಕೆ ಅವಕಾಶವಿದೆ. ಇದರ ಅರ್ಥ:
-
ಜೈಲಿನ ಒಳಗಿರುವ ನಿಗದಿತ ಕಚೇರಿ ಅಥವಾ ಕೊಠಡಿಯಲ್ಲಿ ತಡೆಗೋಡೆಗಳಿಲ್ಲದೆ ಮುಖಾಮುಖಿ ಕುಳಿತು ಮಾತನಾಡಬಹುದು.
-
ವಕೀಲರೊಂದಿಗೆ ಕಾನೂನು ಚರ್ಚೆ ನಡೆಸಲು ಮತ್ತು ಕುಟುಂಬಸ್ಥರೊಂದಿಗೆ ಖಾಸಗಿಯಾಗಿ ಸಂವಹನ ನಡೆಸಲು ಇದು ಸಹಕಾರಿ.
-
ಸಾಮಾನ್ಯವಾಗಿ ಅನಾರೋಗ್ಯ ಅಥವಾ ವಿಶೇಷ ಕಾನೂನು ಸಲಹೆಯ ಅಗತ್ಯವಿದ್ದಾಗ ಇಂತಹ ಮನವಿ ಮಾಡಲಾಗುತ್ತದೆ.
ದರ್ಶನ್ ಅರ್ಜಿಯಲ್ಲಿ ಏನಿದೆ?
ದರ್ಶನ್ ಪರ ವಕೀಲರು 57ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ದರ್ಶನ್ ಅವರ ಪತ್ನಿ, ಮಗ ಮತ್ತು ವಕೀಲರು ಭೇಟಿಗೆ ಬಂದಾಗ ಜಾಲರಿಯ ಆಚೆ ನಿಂತು ಮಾತನಾಡುವ ಬದಲು, ಒಳಗಡೆ ಕುಳಿತು ಮಾತನಾಡಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ. ಆರು ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್, ಕುಟುಂಬದವರನ್ನು ಹತ್ತಿರದಿಂದ ಭೇಟಿಯಾಗಲು ಕೋರ್ಟ್ಗೆ ಈ ಮನವಿ ಸಲ್ಲಿಸಿದ್ದಾರೆ ಎನ್ನಕಾಗಿದೆ.
ಟ್ರಯಲ್ ವಿಚಾರಣೆಗೆ ಪ್ರಾಸಿಕ್ಯೂಷನ್ ಆಕ್ಷೇಪ
ದರ್ಶನ್ ಅವರು ಸಲ್ಲಿಸಿರುವ ಮತ್ತೊಂದು ಪ್ರಮುಖ ಅರ್ಜಿ ಎಂದರೆ ‘ಡೇ ಟು ಡೇ’ (ದಿನನಿತ್ಯ) ವಿಚಾರಣೆ ನಡೆಸುವುದು. ಪ್ರಕರಣದ ಟ್ರಯಲ್ ಅನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ದರ್ಶನ್ ಉದ್ದೇಶ. ಆದರೆ ಇದಕ್ಕೆ ಪ್ರಾಸಿಕ್ಯೂಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನು ಆದ್ಯತೆಯ ಮೇರೆಗೆ ನಡೆಸಲಾಗುತ್ತಿದೆ, ಹೀಗಿರುವಾಗ ಪ್ರತ್ಯೇಕ ಆದೇಶದ ಅಗತ್ಯವಿಲ್ಲ ಎಂಬುದು ಸರ್ಕಾರಿ ಅಭಿಯೋಜಕರ ವಾದ.





