ನವದೆಹಲಿ, ಆಗಸ್ಟ್ 5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ದೇಶಕ್ಕೆ ಮರಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ನನ್ನನ್ನು ಬಂಧಿಸಬಹುದು ಅಥವಾ ಜೈಲಿಗೆ ಹಾಕಬಹುದು, ಆದರೆ ಭಯವು ನನ್ನ ಕರ್ತವ್ಯವನ್ನು ನಿರ್ಧರಿಸುವುದಿಲ್ಲ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಅವರು ದೆಹಲಿಯಲ್ಲಿ ವರ್ಚುವಲ್ ಸಂವಾದದಲ್ಲಿ ಭಾವನಾತ್ಮಕವಾಗಿ ತಿಳಿಸಿದ್ದಾರೆ.
“ನನ್ನ ಜನರಿಂದ ಬೇರ್ಪಟ್ಟಿಲ್ಲ”
ಶೇಖ್ ಹಸೀನಾ ಅವರು ತಮ್ಮನ್ನು “ಬಾಂಗ್ಲಾದೇಶದ ಜನರೊಂದಿಗೆ ಜೀವನ ಕಳೆದ ಮತ್ತು ತಮ್ಮ ದೇಶದಿಂದ ಬಲವಂತವಾಗಿ ದೂರ ಮಾಡಲಾದ ವ್ಯಕ್ತಿ” ಎಂದು ಬಣ್ಣಿಸಿದರು. “ನಾನು ನನ್ನ ದೇಶದಿಂದ ಬಲವಂತವಾಗಿ ದೂರವಾಗಿದ್ದೇನೆ, ಆದರೆ ನನ್ನ ಜನರಿಂದ ನಾನು ಎಂದಿಗೂ ಬೇರ್ಪಟ್ಟಿಲ್ಲ. ಬಾಂಗ್ಲಾದೇಶದ ಜನರ ಋಣವನ್ನು ತೀರಿಸಲು ನಾನು ಯಾವಾಗಲೂ ಸಿದ್ಧನಿದ್ದೇನೆ” ಎಂದು ಅವರು ಹೇಳಿದರು.
ಕಳೆದ ಎರಡು ವರ್ಷಗಳಿಂದ ತಮ್ಮ ಪ್ರೀತಿಯ ಬಾಂಗ್ಲಾದೇಶ ಬಳಲುತ್ತಿರುವುದನ್ನು ಕಂಡು ತಾನು ತೀವ್ರ ನೊಂದಿದ್ದೇನೆ ಎಂದು ಅವರು ವ್ಯಕ್ತಪಡಿಸಿದರು. “1971 ರಲ್ಲಿ 30 ಲಕ್ಷ ಜನರು ಪ್ರಾಣ ತ್ಯಾಗ ಮಾಡಿ ಪಡೆದ ಬಾಂಗ್ಲಾದೇಶವನ್ನು ಕೆಲವು ಗುಂಪುಗಳು ವಿನಾಶದತ್ತ ಕೊಂಡೊಯ್ಯುತ್ತಿವೆ. ಇದು ನಾನು ನಿರ್ಮಿಸಿದ ಬಾಂಗ್ಲಾದೇಶವಲ್ಲ” ಎಂದು ಅವರು ವೇದನೆ ವ್ಯಕ್ತಪಡಿಸಿದರು.
2024ರ ಪ್ರತಿಭಟನೆ ಕುರಿತು ಶೇಖ್ ಹಸೀನಾ ಆರೋಪ
ಶೇಖ್ ಹಸೀನಾ ಅವರು 2024ರ ಜುಲೈ ಮತ್ತು ಆಗಸ್ಟ್ ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಇದು ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ. ಆರಂಭದಿಂದಲೂ ನನ್ನ ಸರ್ಕಾರವು ಸಂವಾದ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿತು. ಆದರೆ ಸುಧಾರಣೆಯ ಭಾಷೆಯ ಹಿಂದೆ, ಸಂಘಟಿತ ಗುಂಪುಗಳು ವಿದ್ಯಾರ್ಥಿಗಳ ಬೇಡಿಕೆಯನ್ನು ಹಿಂಸಾತ್ಮಕ ರಾಜಕೀಯ ಸಾಧನವಾಗಿ ಪರಿವರ್ತಿಸಲು ಕೆಲಸ ಮಾಡುತ್ತಿದ್ದವು” ಎಂದು ಅವರು ಆರೋಪಿಸಿದರು.
ಮುಹಮ್ಮದ್ ಯೂನಸ್ ವಿರುದ್ಧ ಗುರಿ
ಶೇಖ್ ಹಸೀನಾ ಅವರು ತಮ್ಮ ಮಾಜಿ ಎದುರಾಳಿಯೂ ಆಗಿರುವ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಒಬ್ಬ ಮಾಸ್ಟರ್ ಮೈಂಡ್ ನೇತೃತ್ವದಲ್ಲಿ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಚಳವಳಿ ಎಂದು ಮುಹಮ್ಮದ್ ಯೂನಸ್ ಸ್ವತಃ ಹೇಳಿದ್ದಾರೆ. ಅವರ ಸ್ವಂತ ಮಾತುಗಳೇ ಸತ್ಯವನ್ನು ಬಹಿರಂಗಪಡಿಸುತ್ತವೆ. ಇದು ಕೇವಲ ಸ್ವಯಂಪ್ರೇರಿತ ವಿದ್ಯಾರ್ಥಿ ಪ್ರತಿಭಟನೆಯಾಗಿರಲಿಲ್ಲ. ಯಾವುದೇ ಗೋಚರ ಅಥವಾ ಜವಾಬ್ದಾರಿಯುತ ನಾಯಕತ್ವ ಇರಲಿಲ್ಲ, ಸೂಚನೆಗಳನ್ನು ಅದೃಶ್ಯವಾಗಿ ನೀಡಲಾಯಿತು. ಅದನ್ನು ಸಂಘಟಿಸಲಾಯಿತು, ನಿರ್ದೇಶಿಸಲಾಯಿತು ಮತ್ತು ಮತಪೆಟ್ಟಿಗೆಯ ಹೊರಗೆ ಅಧಿಕಾರಕ್ಕೆ ಮಾರ್ಗವನ್ನು ರಚಿಸಲು ಬಳಸಲಾಯಿತು” ಎಂದು ಅವರು ಹೇಳಿದರು.
“ಮುಹಮ್ಮದ್ ಯೂನಸ್ ಅವರಿಗೆ ಇಷ್ಟವಿಲ್ಲದ ಕಾರಣದಿಂದಲೇ ನನ್ನನ್ನು ಸ್ಥಾನದಿಂದ ಕೆಳಗಿಳಿಸಲಾಯಿತು. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಪ್ರಕ್ರಿಯೆಗಳನ್ನು ಧಿಕ್ಕರಿಸಿ ಅವರು ಅಧಿಕಾರಕ್ಕೆ ಬಂದಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ನಾನು ಬಾಂಗ್ಲಾದೇಶಕ್ಕೆ ಮರಳಲೇ ಬೇಕು. ಅಲ್ಲಿ ನನ್ನ ಜನರು ನನ್ನನ್ನು ಹುಡುಕುತ್ತಿದ್ದಾರೆ. ನಾನು ಯಾವುದೇ ಕಾನೂನು ಪ್ರಕ್ರಿಯೆಯನ್ನು ಎದುರಿಸಲು ಸಿದ್ಧನಿದ್ದೇನೆ. ನನ್ನನ್ನು ಬಂಧಿಸಿದರೂ, ಜೈಲಿಗೆ ಹಾಕಿದರೂ ನಾನು ಹಿಂದೆ ಸರಿಯುವುದಿಲ್ಲ” ಎಂದು ಅವರು ಧೃಢವಾಗಿ ಹೇಳಿದರು.
ಬಾಂಗ್ಲಾದೇಶದ ಜನರು ಶೀಘ್ರದಲ್ಲೇ ನಿಜವಾದ ಸತ್ಯ ತಿಳಿಯಲಿದ್ದಾರೆ ಮತ್ತು ದೇಶವು ಮತ್ತೆ ಸ್ಥಿರತೆಯನ್ನು ಕಂಡುಕೊಳ್ಳುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.





