ಬೆಂಗಳೂರು, ಆಗಸ್ಟ್ 5: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪಿದ್ದು, ಸುಮಾರು 16.30 ಲಕ್ಷ ಮತದಾರರು ಪತ್ತೆಯಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ-ಮನೆ ಗಣತಿ ಮತ್ತು ಡಿಜಿಟಲೀಕರಣ ಕಾರ್ಯವು ಶೇ.99.84ರಷ್ಟು ಪೂರ್ಣಗೊಂಡಿದ್ದು, ಮತದಾರರು ಎನ್ಯುಮರೇಷನ್ ಫಾರಂಗಳನ್ನು ಕಡ್ಡಾಯವಾಗಿ ಹಿಂತಿರುಗಿಸುವಂತೆ ಮನವಿ ಮಾಡಿದರು. ಆಗಸ್ಟ್ 8 ಒಳಗೆ ಫಾರಂ ಸಲ್ಲಿಸದಿದ್ದಲ್ಲಿ ಮತದಾರರ ಹೆಸರುಗಳು ಅಂತಿಮ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪರಿಷ್ಕರಣೆ ಪ್ರಕ್ರಿಯೆಯ ವಿವರಗಳು:
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರ ದಾಖಲೆಗಳಿದ್ದು, ಎಲ್ಲರಿಗೂ ಎಣಿಕೆ ನಮೂನೆಗಳನ್ನು ಮುದ್ರಿಸಿ ಬೂತ್ ಮಟ್ಟದ ಅಧಿಕಾರಿಗಳ (BLO) ಮೂಲಕ ವಿತರಿಸಲಾಗಿದೆ. ಈ ಪೈಕಿ 6,88,525 ಮಂದಿ ಆನ್ಲೈನ್ ಮೂಲಕವೇ ಫಾರಂ ಸಲ್ಲಿಸಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 4,43,04,632 (ಶೇ.79.80%) ಮತದಾರರ ವಿವರಗಳು ಡಿಜಿಟಲ್ ಮೂಲಕ ದೃಢೀಕರಿಸಲಾಗಿದೆ.
ಉಳಿದ 1,11,07,461 (ಶೇ.20.04%) ದಾಖಲೆಗಳು ಪರಿಶೀಲನಾ ಹಂತದಲ್ಲಿವೆ. ಪರಿಶೀಲನೆಯ ವೇಳೆ 66.64 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 16.30 ಲಕ್ಷ ಮಂದಿ ಮೃತಪಟ್ಟಿರುವ ಮಾಹಿತಿ, ಹಾಗೂ 16.30 ಲಕ್ಷ ಮತದಾರರು ಪತ್ತೆಯಾಗದಿರುವುದು ದಾಖಲಾಗಿದೆ. ಇದಲ್ಲದೆ, 5.02 ಲಕ್ಷ ದಾಖಲೆಗಳು ‘ಇತರೆ’ ವಿಭಾಗದಲ್ಲಿ ಪರಿಶೀಲನೆಯಲ್ಲಿವೆ.
ಬೆಂಗಳೂರಿನಲ್ಲೇ ಹೆಚ್ಚು ಪರಿಶೀಲನೆ:
ರಾಜಧಾನಿ ಬೆಂಗಳೂರಿನಲ್ಲಿ ಪರಿಶೀಲನೆಗೆ ಒಳಪಡುವ ಮತದಾರರ ಪ್ರಮಾಣವು ಅತ್ಯಧಿಕವಾಗಿದ್ದು, ಇದು ವಿಶೇಷವಾಗಿ ಗಮನ ಸೆಳೆದಿದೆ. ಬೆಂಗಳೂರು ನಗರ, ಉತ್ತರ, ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇ.45ರಿಂದ 51ರವರೆಗೆ ಮತದಾರರ ಮಾಹಿತಿ ಮರುಪರಿಶೀಲನೆಗೆ ಒಳಪಟ್ಟಿದೆ. ಈ ಸಂಖ್ಯೆಯಲ್ಲಿ ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ಸಂಪರ್ಕಕ್ಕೆ ಸಿಗದವರು ಸೇರಿದ್ದಾರೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದರು. ಬೆಂಗಳೂರು ನಗರದಲ್ಲಿ ಅತಿಹೆಚ್ಚು ಜನಸಂಖ್ಯೆ ಮತ್ತು ವಲಸೆಯಿಂದಾಗಿ ಹೆಚ್ಚಿನ ಮತದಾರರ ಮಾಹಿತಿ ಪರಿಶೀಲನೆಗೆ ಒಳಪಟ್ಟಿದೆ.
ಫಾರಂ ಸಲ್ಲಿಸದಿದ್ದರೆ ಹೆಸರು ಕೈಬಿಡುವ ಎಚ್ಚರಿಕೆ
ಜಿ.ಬಿ.ಎ (ಗ್ರೇಟರ್ ಬೆಂಗಳೂರು ಪ್ರದೇಶ) ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷ ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ. ಮತದಾರರು ಭರ್ತಿ ಮಾಡಿದ ಫಾರಂಗಳನ್ನು ಹಿಂದಿರುಗಿಸಿದರೆ ಮಾತ್ರ ಅವರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಮುಂದುವರಿಯಲಿದೆ.
ಫಾರಂ ಸಲ್ಲಿಸದವರ ಹೆಸರು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಎಚ್ಚರಿಸಿದರು. ಆದ್ದರಿಂದ ಎಲ್ಲಾ ಅರ್ಹ ಮತದಾರರು ಆಗಸ್ಟ್ 8ರೊಳಗೆ ಫಾರಂಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾವಾರು ವಿತರಣೆ ವಿವರ
ಹಾವೇರಿ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಪ್ಪಳ, ವಿಜಯನಗರ, ಗದಗ, ಕೋಲಾರ, ಕೊಡಗು, ಧಾರವಾಡ, ಯಾದಗಿರಿ, ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ಉತ್ತರ, ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರಂಗಳ ವಿತರಣೆ ಪೂರ್ಣಗೊಂಡಿದೆ.
ರಾಜಕೀಯ ವಿವಾದ ಮತ್ತು ಪಾರದರ್ಶಕತೆಯ ಭರವಸೆ
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಮತದಾರರ ಹೆಸರು ಕೈಬಿಡುವಿಕೆ, ಸ್ಥಳಾಂತರಗೊಂಡ ಮತದಾರರ ದಾಖಲೆ, ಮೃತರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಿಕೆ ಹಾಗೂ ಡಿಜಿಟಲ್ ಪರಿಶೀಲನೆಯ ಪಾರದರ್ಶಕತೆ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆ ಚುನಾವಣಾ ಆಯೋಗವು ಮನೆ-ಮನೆ ಪರಿಶೀಲನೆ, ಡಿಜಿಟಲ್ ದಾಖಲೆಗಳ ದೃಢೀಕರಣ ಹಾಗೂ ಸಾರ್ವಜನಿಕರಿಂದ ನೇರ ಫಾರಂ ಸ್ವೀಕಾರ ಮೂಲಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಯ ಶುದ್ಧೀಕರಣದ ಉದ್ದೇಶ ಅರ್ಹ ಮತದಾರರ ಹೆಸರುಗಳನ್ನು ಉಳಿಸಿ, ನಕಲಿ, ಮೃತ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರುಗಳನ್ನು ಮಾತ್ರ ನಿಯಮಾನುಸಾರ ಪರಿಷ್ಕರಿಸುವುದಾಗಿದೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಸಹಕರಿಸಿ ತಮ್ಮ ವಿವರಗಳನ್ನು ದೃಢೀಕರಿಸಬೇಕು ಎಂದು ಚುನಾವಣಾ ಆಯೋಗವು ಮನವಿ ಮಾಡಿದೆ.





