ಢಾಕಾ, (ಜುಲೈ 24): ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ತಮ್ಮ ತೀವ್ರವಾದ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ತಮ್ಮ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿದೆ. 76 ವರ್ಷದ ಶಹಾಬುದ್ದೀನ್ ಅವರು 2023ರ ಏಪ್ರಿಲ್ನಲ್ಲಿ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸಂಸತ್ತಿನ ಸ್ಪೀಕರ್ ಹಫೀಜ್ ಉದ್ದೀನ್ ಅಹ್ಮದ್ ಅವರಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರದಲ್ಲಿ, ತಾವು ಆಟೋನಾಮಿಕ್ ನ್ಯೂರೋಪತಿ (Autonomic Neuropathy) ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದು ತಮ್ಮ ದೈಹಿಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಜೊತೆಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂತ್ರಪಿಂಡದ ತೊಂದರೆಗಳಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ರಾಷ್ಟ್ರದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುವುದು ಆರೋಗ್ಯದ ಕಾರಣಗಳಿಂದ ಕಷ್ಟವಾಗಿರುವುದರಿಂದ ಹುದ್ದೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಪ್ತರೆಂದು ಪರಿಗಣಿಸಲ್ಪಟ್ಟ ಶಹಾಬುದ್ದೀನ್, 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರೀ ಪ್ರತಿಭಟನೆ ಮತ್ತು ರಾಜಕೀಯ ಬಿಕ್ಕಟ್ಟಿನ ಬಳಿಕವೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಆ ಪ್ರತಿಭಟನೆಗಳ ನಂತರ ಶೇಖ್ ಹಸೀನಾ ಭಾರತಕ್ಕೆ ತೆರಳಿದರೆ, ದೇಶದಲ್ಲಿ ಮಧ್ಯಂತರ ಆಡಳಿತ ವ್ಯವಸ್ಥೆ ಜಾರಿಯಾಯಿತು.
ಬಾಂಗ್ಲಾದೇಶದಲ್ಲಿ ಅಧ್ಯಕ್ಷ ಹುದ್ದೆ ಮುಖ್ಯವಾಗಿ ಸಾಂವಿಧಾನಿಕ ಹುದ್ದೆಯಾಗಿದ್ದು, ಆಡಳಿತಾತ್ಮಕ ಅಧಿಕಾರಗಳು ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ಕೈಯಲ್ಲಿರುತ್ತವೆ. ಆದಾಗ್ಯೂ, ರಾಷ್ಟ್ರದ ಮುಖ್ಯಸ್ಥ ಹಾಗೂ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ಅಧ್ಯಕ್ಷರ ಹುದ್ದೆಗೆ ರಾಜಕೀಯವಾಗಿ ಮಹತ್ವದ ಸ್ಥಾನವಿದೆ.
ಶಹಾಬುದ್ದೀನ್ ಅವರು ಮಾಜಿ ನ್ಯಾಯಾಧೀಶರಾಗಿದ್ದು, ಶೇಖ್ ಹಸೀನಾ ಸರ್ಕಾರದ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಸೀನಾ ಸರ್ಕಾರ ಪತನವಾದ ನಂತರ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹಲವು ಆಡಳಿತಾತ್ಮಕ ಹಾಗೂ ಕಾನೂನು ತಿದ್ದುಪಡಿಗಳನ್ನು ಕೈಗೊಂಡಿದ್ದು, ಮಾಜಿ ಅವಾಮಿ ಲೀಗ್ ನಾಯಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಹೊಸ ಅಧ್ಯಕ್ಷರು ಆಯ್ಕೆಯಾಗುವವರೆಗೂ ಅಹ್ಮದ್ ಅವರು ಬಾಂಗ್ಲಾದೇಶ ಸಂವಿಧಾನದ ಪ್ರಕಾರ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಇದೀಗ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ, ಈ ವರ್ಷದ ಅಂತ್ಯದೊಳಗೆ ಬಾಂಗ್ಲಾದೇಶಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಅವರು ದೇಶಕ್ಕೆ ಮರಳಿದರೆ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಧ್ಯಂತರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಶಹಾಬುದ್ದೀನ್ ಅವರ ರಾಜೀನಾಮೆಯಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಮತ್ತು ದೇಶದ ರಾಜಕೀಯ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದರತ್ತ ಜಾಗತಿಕ ಗಮನ ನೆಟ್ಟಿದೆ.





