ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಣಿ ಮಾಡಿಸುವ ಕೊನೆಯ ದಿನ ನಾಳೆ ಆಗಿದೆ. ಆದರೆ ಇನ್ನೂ ಸಾವಿರಾರು ವಿದ್ಯಾರ್ಥಿಗಳು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದೆ ತೀವ್ರ ಆತಂಕದಲ್ಲಿದ್ದಾರೆ.
ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಬಹುತೇಕ ವಿದ್ಯಾರ್ಥಿಗಳು ಹೆಚ್ಚುವರಿ ವಿಷಯಗಳನ್ನು ಸೇರಿಸಲು ಅವಕಾಶವಿಲ್ಲ ಎಂದು ದೂರಿದ್ದಾರೆ. “Add Subject” ಆಯ್ಕೆ ಕಾಣಿಸುತ್ತಿಲ್ಲ ಅಥವಾ ಕ್ಲಿಕ್ ಮಾಡಿದಾಗಲೂ ಸೇರ್ಪಡೆಯಾಗುತ್ತಿಲ್ಲ. ಇನ್ನು ಕೆಲವರಿಗೆ ಶುಲ್ಕ ಪಾವತಿ ಲಿಂಕ್ ತೆರೆಯುತ್ತಿಲ್ಲ. ಪೇಮೆಂಟ್ ಗೇಟ್ವೇ ಲೋಡ್ ಆಗದೆ ಎರರ್ ತೋರಿಸುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಕಾಲೇಜುಗಳನ್ನು ಸಂಪರ್ಕಿಸಿದಾಗ “ವೆಬ್ಸೈಟ್ನಲ್ಲಿ ಮಾಡಿ” ಎಂದು ಹೇಳಲಾಗುತ್ತಿದೆ. ವೆಬ್ಸೈಟ್ನಲ್ಲಿ ಸಮಸ್ಯೆ ತಿಳಿಸಿದರೆ “ಕಾಲೇಜಿಗೆ ಹೋಗಿ” ಎಂದು ಸಲಹೆ ನೀಡಲಾಗುತ್ತಿದೆ. ಈ ಗೊಂದಲದಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೊಳಗಾಗಿದ್ದಾರೆ.
ಕೆಲವು ವಿದ್ಯಾರ್ಥಿಗಳು ಒಂದು ವಿಷಯಕ್ಕೆ ಮಾತ್ರ ನೋಂದಣಿ ಆಗುತ್ತಿದೆ. ಎರಡನೇ ವಿಷಯ ಸೇರಿಸಲು ಯತ್ನಿಸಿದರೂ ಆಗುತ್ತಿಲ್ಲ ಎಂಬ ಸಮಸ್ಯೆ ವಿದ್ಯಾರ್ಥಿಗಳದ್ದಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ವೆಬ್ಸೈಟ್ ಬಹುತೇಕ ಸ್ಲೋ ಆಗುತ್ತಿದೆ. ಇದರಿಂದ ನಾಳೆ ಕೊನೆಯ ದಿನವೂ ನೋಂದಣಿ ಮಾಡಲು ಸಾಧ್ಯವಾಗದೇ ಇರುವ ಭಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಮಸ್ಯೆಗಳನ್ನುಹೇಳಿಕೊಳ್ಳುತ್ತಿದ್ದಾರೆ. “ನಾಳೆ ಕೊನೆಯ ದಿನ, ಇನ್ನೂ ನೋಂದಣಿ ಆಗಿಲ್ಲ. ಏನು ಮಾಡುವುದು?” ಎಂಬ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ.
ಕರ್ನಾಟಕ ಪರೀಕ್ಷಾ ಮಂಡಳಿ (KSEAB) ಈ ಸಮಸ್ಯೆಗಳನ್ನು ಸರಿಪಡಿಸುವ ಉದ್ಧೇಶದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇದುವರೆಗೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗದರ್ಶನ ಅಥವಾ ಪರಿಹಾರ ಸಿಕ್ಕಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ.
ಈಗಾಗಲೇ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಬಹಳ ಬೇಗ ವೆಬ್ಸೈಟ್ಗೆ ಲಾಗಿನ್ ಆಗಿ ಪ್ರಯತ್ನಿಸುವಂತೆ ಸಲಹೆ ನೀಡಲಾಗಿದೆ. ವಿವಿಧ ಬ್ರೌಸರ್ಗಳನ್ನು ಬಳಸಿ, ಸ್ಕ್ರೀನ್ಶಾಟ್ ತೆಗೆದುಕೊಂಡು ಕಾಲೇಜು ಅಥವಾ ಮಂಡಳಿಗೆ ದೂರು ನೀಡುವುದು ಉತ್ತಮ.





