ವಿಜಯಪುರ: ನನ್ನ ಮಗು ಆರೋಗ್ಯ ಸರಿ ಇರಲಿಲ್ಲ, ನವಜಾತ ಶಿಶು ಅದು. ನನ್ನ ಕಂದನನ್ನು ಐಸಿಯುನಲ್ಲಿ ಇಡಲಾಗಿತ್ತು. ತಂದೆಯಾದ ನನಗೆ ಮಗುವಿನ ಆರೋಗ್ಯ ಹೇಗಿದೆ ಎಂದು ನೋಡಿಕೊಳ್ಳಲು, ವಿಚಾರಿಸಿಕೊಳ್ಳಲು ಆಗಲಿಲ್ಲ. ಇದರ ಪರಿಣಾಮ ನನ್ನ ಕಂದನನ್ನ ನಾನು ಕಳೆದುಕೊಂಡೆ. ಹೀಗೆ ಕಣ್ಣೀರು ಹಾಕುತ್ತಿರುವುದು ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ. ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಒಬ್ಬ ಪೊಲೀಸ್.
ಆ ನವಜಾತ ಶಿಶು ಹುಟ್ಟಿದ ಸಮಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ನಾನು ಆಸ್ಪತ್ರೆಯಲ್ಲಿ ಇರಬೇಕಿತ್ತು. ಮಗುವಿನ ಆರೋಗ್ಯ ನೋಡಿಕೊಳ್ಳಬೇಕಿತ್ತು. ಆದರೆ ನನಗೆ ರಜೆ ಕೊಡಲಿಲ್ಲ. ಹೀಗೆಂದು ನೊಂದುಕೊಂಡಿರುವ, ಕಣ್ಣೀರು ಹಾಕುತ್ತಿರುವ ಆ ಪೊಲೀಸ್ ಹೆಸರು ಎ ಎಸ್ ಬಂಡುಗೋಳ.
ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಕಾನ್ಸ್ಸ್ಟೇಬಲ್ ಬಂಡುಗೋಳ ತನ್ನ ಮೇಲಾಧಿಕಾರಿಗಳಲ್ಲಿ ಈ ಸಂಬಂಧ ರಜೆಗಾಗಿ ಪರಿಪರಿ ಬೇಡಿಕೊಂಡರು. ಅಧಿಕಾರಿಗಳು ಈ ಕಾನ್ಸ್ಸ್ಟೇಬಲ್ ವಿಷಯದಲ್ಲಿ ಕ್ಯಾರೆ ಎನ್ನಲಿಲ್ಲ ಎಂದು ಕೇಳಿಬರುತ್ತಿದೆ.
ದಿಕ್ಕು ಕಾಣದ ಬಂಡುಗೋಳ ತನ್ನ ಮಗುವನ್ನು ಕಳೆದುಕೊಂಡಿರುವ ದುಃಖದಲ್ಲೇ ತನ್ನ ಪೊಲೀಸ್ ಸಿಬ್ಬಂದಿಯ ಗ್ರೂಪ್ನಲ್ಲಿ ತನ್ನ ನೋವನ್ನ ಹೇಳಿಕೊಂಡಿದ್ದಾನೆ.
ಈ ಘಟನೆ ಸಂಬಂಧದಲ್ಲಿ ಪೊಲೀಸ್ ಕಾನ್ಸ್ಸ್ಟೇಬಲ್ ಬಂಡುಗೋಳ ಡಿಜಿಪಿ, ಗೃಹ ಸಚಿವ ಡಾ. ಜಿ ಪರಮೇಶ್ವರ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಟ್ಯಾಗ್ ಮಾಡಲಾಗಿದೆ.
ವಸ್ತುಸ್ಥಿತಿಯನ್ನೇ ಅರಿಯದ ಅಧಿಕಾರಿಗಳು ಮಾಡಿರುವರೆನ್ನಲಾದ ತಪ್ಪಿಗೆ ಪಾಪ ಆ ನವಜಾತ ಶಿಶು ಪ್ರಾಣಬಿಟ್ಟಿದೆ. ಒಂದೊಮ್ಮೆ ಬಂಡುಗೋಳ ಏನೇ ತಪ್ಪು ಮಾಡಿದ್ದರೂ, ಇಂತಹ ಸಂದರ್ಭದಲ್ಲಿ ಮಾನವೀಯತೆ ತೋರಿಸಬೇಕಾದವರು ಯಾರು? ಇದಕ್ಕೆ ಉತ್ತರಿಸುವವರು ಯಾರು? ಇಂತಹ ಉದ್ಧಟತನ ತೋರಿದ ಅಧಿಕಾರಿ ಮೇಲೆ ಕ್ರಮ ಏನು? ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತೆಗೆದುಕೊಳ್ಳುವ ಕ್ರಮ ಅಥವಾ ಸೂಚಿಸುವ ಆದೇಶ ಏನು ಎಂಬುದನ್ನ ಈಗ ಜನಸಾಮಾನ್ಯರು ಅಲ್ಲದೇ ಪೊಲೀಸ್ ಇಲಾಖೆ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.