ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣದ ಬಗ್ಗೆ ಅವರ ತಂದೆ ಮೋಹನ್ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಾಗಿ ತಮ್ಮ ಮಗ ಜೀವ ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಅಳುತ್ತ ಮಾತನಾಡಿದ ಮೋಹನ್ ಶೆಟ್ಟಿ, “ನನ್ನ ಮಗನಿಗೆ ಜೀವ ಬೆದರಿಕೆ ಇದೆ ಎಂದು ನಮಗೆ ಆತಂಕವಿತ್ತು. ಅನೇಕ ಬಾರಿ ಅವನಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಶತ್ರುಗಳು ಅವನನ್ನು ಫಾಲೋ ಮಾಡುತ್ತಿದ್ದಾರೆ ಎಂದು ಆತ ತಿಳಿಸಿದ್ದ. ‘ಹುಷಾರಾಗಿರು, ಬೇಗ ಮನೆಗೆ ಬಾ’ ಎಂದು ಹೇಳುತ್ತಿದ್ದೆ. ಗುಪ್ತಚರ ಇಲಾಖೆ ಮತ್ತು ಪೊಲೀಸರು ಗಂಭೀರವಾಗಿ ಕೆಲಸ ಮಾಡಿದ್ದರೆ, ನನ್ನ ಮಗನ ಜೀವ ಉಳಿಯುತ್ತಿತ್ತು. ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ಸರ್ಕಾರದ ಅಲ್ಪಸಂಖ್ಯಾತರ ಪರ ನೀತಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಹಾಸ್ ಶೆಟ್ಟಿಯ ಇತ್ತೀಚಿನ ಬದಲಾವಣೆಯ ಬಗ್ಗೆ ಮಾತನಾಡಿದ ಅವರು, “ಕೆಲವು ದಿನಗಳಿಂದ ಆತ ತುಂಬಾ ಬದಲಾಗಿದ್ದ. ಮನೆಗೆ ಆಧಾರ ಸ್ತಂಭವಾಗಿದ್ದ. ಮನೆಯ ಲಾರಿಯನ್ನು ಬಾಡಿಗೆಗೆ ಕೊಟ್ಟಿದ್ದ. ಏಪ್ರಿಲ್ 30ರಂದು ತಮ್ಮನ ಮಗಳ ಮದುವೆಗೆ ಬಂದಿದ್ದ. ಆಗ ಎಲ್ಲರೊಂದಿಗೆ ಮಾತನಾಡಿ, ಒಟ್ಟಿಗೆ ಊಟ ಮಾಡಿದ್ದೆವು,” ಎಂದು ಭಾವುಕರಾದರು.
ಪ್ರಕರಣದ ತನಿಖೆ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ ಮೋಹನ್ ಶೆಟ್ಟಿ, “ಸಿದ್ದರಾಮಯ್ಯ ಸರ್ಕಾರದ ತನಿಖೆಯ ಮೇಲೆ ನನಗೆ ನಂಬಿಕೆಯಿಲ್ಲ. ಅವರು ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದಾರೆ. ಸರಿಯಾದ ತನಿಖೆಯಾಗುವುದಿಲ್ಲ ಎಂಬ ಆತಂಕವಿದೆ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು,” ಎಂದು ಕಣ್ಣೀರಿನೊಂದಿಗೆ ಆಗ್ರಹಿಸಿದರು.