ರಾಯಚೂರು: ರಾಯಚೂರು ನಗರದ ವಾಸವಿನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿ ಜಂಬನಗೌಡ ಹಾಗೂ ಆತನ ಪೋಷಕರು ಕೊಲೆ ಮಾಡಿ ಬಳಿಕ ನೇಣು ಹಾಕಿರುವ ಆರೋಪಿಸಿದ್ದಾರೆ. ಘಟನೆ ಬೆನ್ನಲ್ಲೇ ಮೃತಳ ಪತಿ ಪರಾರಿಯಾಗಿದ್ದಾನೆ.
ಪ್ರಸನ್ನ ಲಕ್ಷ್ಮೀ (35) ಮೃತ ಮಹಿಳೆ. ಪತಿ ಜಂಬನಗೌಡ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಕಳೆದ ಕೆಲವು ಸಮಯದಿಂದ ಡಿವೋರ್ಸ್ಗಾಗಿ ಪತ್ನಿಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದನು. 16 ವರ್ಷಗಳ ದಾಂಪತ್ಯ ಜೀವನದ ಬಳಿಕ, ಜಂಬನಗೌಡ ಪ್ರಸನ್ನ ಲಕ್ಷ್ಮೀಯನ್ನು ಪ್ರತಿದಿನ ಪೀಡಿಸುತ್ತಿದ್ದನು. ಕೆಲವು ದಿನಗಳ ಹಿಂದೆ ಪ್ರಸನ್ನ ಲಕ್ಷ್ಮೀ ತನ್ನ ಮಕ್ಕಳೊಂದಿಗೆ ಹೊಸ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು. ನಂತರ ಪತಿ ಹಾಗೂ ಅವರ ಕುಟುಂಬಸ್ಥರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದಳು. ಅವರ ಮನೆಯವರ ಕಿರುಕುಳ ತಾಳಲಾರದೇ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಳು.
ಕಳೆದ ರಾತ್ರಿ ಮಕ್ಕಳು ಮನೆಯಿಂದ ಹೊರಗೆ ಹೋಗಿದ್ದ ವೇಳೆ, ಪ್ರಸನ್ನ ಲಕ್ಷ್ಮೀ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಯ ಬಳಿಕ ಪತಿ ಜಂಬನಗೌಡ ಪರಾರಿಯಾಗಿದ್ದಾನೆ. ಇನ್ನು ಈ ಬಗ್ಗೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.