ಬೆಂಗಳೂರು, ಆ.03: “ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚರ್ಚೆ
“ನಮ್ಮ ಮುಂದಿರುವ ಸವಾಲು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಹಾಗೂ ಕಾವೇರಿ ಭಾಗದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ತಾತ್ಕಾಲಿಕವಾಗಿ ಮಳೆಯಿಂದ ಸಮಸ್ಯೆ ನಿವಾರಣೆಯಾಗಿರಬಹುದು. ಭೀಕರವಾದ ಕಂಟಕ ಎದುರಾಗಿತ್ತು. ದೇವರ ಕೃಪೆಯಿಂದ ಇದು ಸಧ್ಯಕ್ಕೆ ನಿವಾರಣೆಯಾಗಿದೆ. ತಮಿಳುನಾಡಿಗೆ 3,50 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದ್ದು, ನಾವು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತಾಗಿದೆ. ಕೆಆರ್ ಎಸ್, ಹೇಮಾವತಿ ತುಂಬಿಲ್ಲ, ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆ ಬೀಳುತ್ತಿದ್ದು, ತುಂಗಭದ್ರಾಗೆ ಇನ್ನು ನೀರು ಬರಬೇಕು. ಆಲಮಟ್ಟಿಯಲ್ಲಿ ನೀರಿನ ಹರಿವು ಇದೆ. ಬರಗಾಲದ ಛಾಯೆ ಇನ್ನು ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳು ಆಗಿವೆ. ನಾನು ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.
ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಲು ಸೂಚನೆ
“ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ನಾಳೆ ಒಂದು ದಿನ ಹೊರತುಪಡಿಸಿ ನಾಡಿದ್ದಿನಿಂದ ನೀವುಗಳು ನಿಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ನೀಡಬೇಕು. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದವರು. ಸಾಕಷ್ಟು ಅನುಭವಸ್ಥರು. ಅವರಿಗೆ ಸಮಯ ಬಂದಾಗ ಉತ್ತರ ನೀಡೋಣ. ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಹೊಸ ಮುಖಗಳಿಗೆ ಅವಕಾಶ
“ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ನಾನು ಹಾಗೂ ಪರಮೇಶ್ವರ್ ಅವರು ಮೊದಲ ಬಾರಿಗೆ ಶಾಸಕರಾಗಿ ಮಂತ್ರಿಯಾಗಿದ್ದೇವೆ. ಕೆಲವು ಸಂದರ್ಭದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಕೆಲವೊಮ್ಮೆ ಮಾಡಿಲ್ಲ. ನಾವು ಅಲ್ಲಿಂದ ಇಲ್ಲಿಯವರೆಗೆ ಬಂದು ಈ ಸ್ಥಾನ ತಲುಪಿದ್ದೇವೆ. ಇಂದು 19 ಸದಸ್ಯರು ಸಂಪುಟ ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಅನೇಕ ಅರ್ಹರು ಇದ್ದರು. ನಮ್ಮಲ್ಲಿ ಅರ್ಹತೆ ಇಲ್ಲದವರು ಯಾರೂ ಇಲ್ಲ. ನಮ್ಮ ಪಕ್ಷ ತೀರ್ಮಾನ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನಾನು ಹಾಗೂ ಪರಮೇಶ್ವರ್ ಅವರು ಬಂದಾಗ, ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದರು. ಆಗ ಬಂಗಾರಪ್ಪನವರು ಸಚಿವ ಸಂಪುಟದಲ್ಲಿ ಇರಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಲಕ್ಕಪ್ಪನವರು ಇರಲಿಲ್ಲ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅಜೀಜ್ ಸೇಠ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಲು ಆಗಿರಲಿಲ್ಲ. ಆಸೆ ಎಲ್ಲರಿಗೂ ಇರುತ್ತದೆ, ತಾಳ್ಮೆಯಿಂದ ಇದ್ದರೆ ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಅವಕಾಶ ನೀಡಲಾಗುವುದು. ನಾನು ಹಾಗೂ ಪರಮೇಶ್ವರ್ ಅವರು ನಮ್ಮ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರಿಗೂ ಗೌರವ ನೀಡುತ್ತೇವೆ” ಎಂದು ವಿವರಿಸಿದರು.
ಮಹಿಳೆಯರಿಗೂ ಅವಕಾಶ ನೀಡುತ್ತೇವೆ
“ನಂತರ ಧರಂ ಸಿಂಗ್ ಅವರ ಕಾಲದಲ್ಲಿ ನನ್ನನ್ನು ಹಾಗೂ ಪರಮೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ. ನಾವು ಬಹಳ ತಾಳ್ಮೆಯಿಂದ ಇದ್ದೆವು. ನಮ್ಮ ತಾಳ್ಮೆಗೆ ಇಂದು ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ, ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ.ಇರೋದು 33 ಸ್ಥಾನ ಮಾತ್ರ. ಕೃಷ್ಣಾ ಅವರ ಕಾಲದಲ್ಲೇ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಂತ್ರಿ ಮಾಡುವ ಕಾಲ ಮುಗಿದಿದೆ. ಕೇವಲ 15%ಗೆ ಮಿತಿ ಹಾಕಲಾಗಿದೆ. ಮೇಲ್ಮನೆಯಿಂದ ಒಬ್ಬರು ಕಡ್ಡಾಯವಾಗಿ ಇರಲಿದೆ. ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಮಹಿಳೆಗೆ ಆದ್ಯತೆ ನೀಡುವುದು. ಈ ಹಿಂದೆಯೂ ಮಹಿಳೆಯರು ಇದ್ದರು, ಈಗ ಮಹಿಳೆಗೆ ಉಪಸಭಾಪತಿ ಸ್ಥಾನ ನೀಡಿದ್ದೇವೆ. ಸಚಿವ ಸಂಪುಟದಲ್ಲೂ ಒಂದು ಸ್ಥಾನ ಮಹಿಳೆಯರಿಗೆ ನೀಡಲಾಗುವುದು” ಎಂದು ಭರವಸೆ ನೀಡಿದರು.





