ಮಂಡ್ಯ ಜಿಲ್ಲೆಯ ಬಸರಾಳು ತಾಲ್ಲೂಕಿನ ಕಾರೆಕಟ್ಟೆ ಗ್ರಾಮದ ಬಳಿ ಇರುವ ಕೀರ್ತಿ ಕೆಮಿಕಲ್ಸ್ ಇಂಡಸ್ಟ್ರೀಸ್ನಲ್ಲಿ ಭೀಕರ ರಾಸಾಯನಿಕ ಟ್ಯಾಂಕ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕಾರ್ಮಿಕರು ಧಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತರ ದೇಹಗಳು ಛಿದ್ರಛಿದ್ರವಾಗಿವೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರ ಕೈ ಸಂಪೂರ್ಣವಾಗಿ ಕತ್ತರಿಸಿ ಹೋಗಿದೆ.
ಸ್ಫೋಟ ಸಂಭವಿಸಿದ್ದು ಇಂದು ಬೆಳಗ್ಗೆ. ರಾಸಾಯನಿಕಗಳಿದ್ದ ಬೃಹತ್ ಟ್ಯಾಂಕ್ನಲ್ಲಿ ಏಕಾಏಕಿ ಸ್ಫೋಟವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಮೃತರಿಬ್ಬರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣ ಮೈಸೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (MIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ನಂತರ ಕಾರ್ಖಾನೆಯ ಸಿಬ್ಬಂದಿ ಹಲವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಬಸರಾಳು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಹೆಸರುಗಳು, ಗಾಯಾಳುಗಳ ವಿವರಗಳು ಮತ್ತು ಸ್ಫೋಟದ ನಿಖರ ಕಾರಣವನ್ನು ಕಲೆಹಾಕುತ್ತಿದ್ದಾರೆ. ಅಗ್ನಿಶಾಮಕದಳ ಮತ್ತು ತಜ್ಞರು ಸ್ಥಳದಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹರಡಿದ್ದು, ಕಾರ್ಖಾನೆಯ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ರಾಸಾಯನಿಕ ಕಾರ್ಖಾನೆಗಳಲ್ಲಿ ಸಂಭವಿಸುವ ಅಪಘಾತಗಳು ಪದೇ ಪದೇ ಆಗುತ್ತಿರುವುದರಿಂದ ಕಟ್ಟುನಿಟ್ಟಾದ ನಿಯಮಾವಳಿಗಳ ಅಗತ್ಯತೆಯನ್ನು ಇದು ಮತ್ತೊಮ್ಮೆ ಎತ್ತಿ ತೋರಿಸಿದೆ.




