ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ತೀರಿಸಲು ಪಾದಯಾತ್ರೆ ಬಂದಿದ್ದ 10 ವರ್ಷದ ಬಾಲಕನೊಬ್ಬ ಚಿರತೆಯ ದಾಳಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರಿನ ಲಗ್ಗೆರೆ ನಿವಾಸಿ ಸುರೇಶ್ ಅವರ ಮಗ ಹರ್ಷಿತ್ (10) ಈ ದುರಂತದಲ್ಲಿ ಮೃತಪಟ್ಟ ದುರ್ದೈವಿ. ಹರ್ಷಿತ್ ತನ್ನ ಪೋಷಕರು ಮತ್ತು ಇತರ 10 ಜನರ ತಂಡದೊಂದಿಗೆ ಭಾನುವಾರ (ಮೇ 10) ಮುಂಜಾನೆ ನಾಗಮಲೆ ಕಡೆಗೆ ಪಾದಯಾತ್ರೆ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಘಟನೆಯ ವಿವರ : ದಟ್ಟ ಅರಣ್ಯದ ನಡುವಿನ ಹಾದಿಯಲ್ಲಿ ಸಾಗುತ್ತಿದ್ದಾಗ ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಏಕಾಏಕಿ ಹರ್ಷಿತ್ ಮೇಲೆರಗಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಬಾಲಕನನ್ನು ಕುತ್ತಿಗೆ ಕಚ್ಚಿ ಹಿಡಿದು ಚಿರತೆ ದಟ್ಟ ಕಾಡಿನೊಳಗೆ ಎಳೆದೊಯ್ದಿದೆ. ಪೋಷಕರು ಮತ್ತು ಯಾತ್ರಿಕರು ಕಿರುಚಾಡುತ್ತಾ ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಅರ್ಧ ಗಂಟೆ ಹುಡುಕಾಟ ನಡೆಸಿದ ನಂತರ ಕಾಡಿನ ಅಂಚಿನಲ್ಲಿ ರಕ್ತದ ಮಡುವಿನಲ್ಲಿ ಹರ್ಷಿತ್ ಅವರ ಮೃತದೇಹ ಪತ್ತೆಯಾಗಿದೆ.
ಭಕ್ತರ ಆಕ್ರೋಶ : ಈ ಘಟನೆಯು ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾದಯಾತ್ರೆ ಮಾಡುವ ಪ್ರತಿಯೊಬ್ಬರಿಂದಲೂ ಅರಣ್ಯ ಇಲಾಖೆ ತಲಾ 200 ರೂಪಾಯಿ ಶುಲ್ಕ ಪಡೆಯುತ್ತಿದ್ದರೂ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಯಾತ್ರಿಕರು ಆರೋಪಿಸಿದ್ದಾರೆ. ಕಾಡುಪ್ರಾಣಿಗಳ ಸಂಚಾರದ ಬಗ್ಗೆ ಮುನ್ನೆಚ್ಚರಿಕೆ ಫಲಕಗಳು ಕೂಡ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ಮಂಡ್ಯ ಮೂಲದ ಪಾದಯಾತ್ರಿಯೊಬ್ಬರು ಚಿರತೆಗೆ ಬಲಿಯಾಗಿದ್ದರು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಎದ್ದಿವೆ.





