ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳದ ನಿವಾಸಿ ರಘುರಾಮ ಶೆಟ್ಟಿ ದೂರು ಸಲ್ಲಿಸಿದ್ದು, ಈ ದೂರಿನ ಆಧಾರದ ಮೇಲೆ ವಕೀಲ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಕೀಲ ಮಂಜುನಾಥ್ ಅವರು ಧರ್ಮಸ್ಥಳದಲ್ಲಿ ಯಥೇಚ್ಛವಾಗಿ ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು. ಪಾಯಿಂಟ್ 1ರಲ್ಲಿ 2, ಪಾಯಿಂಟ್ 2ರಲ್ಲಿ 3, ಪಾಯಿಂಟ್ 4 ಮತ್ತು 5ರಲ್ಲಿ ತಲಾ 8, ಪಾಯಿಂಟ್ 9ರಲ್ಲಿ 6 ರಿಂದ 7 ಹೆಣಗಳು, ಮತ್ತು ಪಾಯಿಂಟ್ 13ರಲ್ಲಿ ಯಥೇಚ್ಛವಾಗಿ ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿದ್ದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಗೆ ಸಂಬಂಧಿಸಿದಂತೆ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಪ್ರಸಾರ ಮಾಡಿದ ಆರೋಪದ ಮೇಲೆ ವಕೀಲ ಮಂಜುನಾಥ್ ಅವರ ಮೇಲೆ ಕೇಸ್ ದಾಖಲಿಸಲಾಗಿದೆ.





