ನನಗೆ ನೀನು, ನಿನಗೆ ನಾನು ಎಂದು ಮುಪ್ಪಿನ ಜೀವನವನ್ನೂ ಸುಂದರವಾಗಿ ಕಳೆಯುತ್ತಿದ್ದ ವೃದ್ಧ ದಂಪತಿಯ ಜೀವನ ಸೈಬರ್ ವಂಚಕರ ಕಿರುಕುಳದಿಂದ ದುರಂತ ಅಂತ್ಯ ಕಂಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಡಿಯಾಂಗೋ ನಜರತ್ (83) ತಮ್ಮ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರ ಪತ್ನಿ ಪ್ರೇವಿಯಾನಾ ನಜರತ್ (79) ಅವರು ಕೂಡ ಮಾತ್ರೆಗಳನ್ನು ಸೇವಿಸಿ ಜೀವ ಬಿಟ್ಟಿದ್ದಾರೆ. ಈ ದಂಪತಿ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ನಿವಾಸಿಗಳಾಗಿದ್ದರು. ಮಾರ್ಚ್ 28 ಸಂಜೆ ತಮ್ಮ ಮನೆಯಲ್ಲಿ ಡಿಯಾಂಗೋ ಆತ್ಮಹತ್ಯೆಗೆ ಶರಣಾದರೆ, ಇದನ್ನು ಕಂಡ ಪತ್ನಿಯು ಕೂಡ ಸಕ್ಕರೆ ಕಾಯಿಲೆ ಮಾತ್ರೆಗಳನ್ನು ನುಂಗಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಮಕ್ಕಳಿಲ್ಲದ ಈ ದಂಪತಿ ಒಬ್ಬರಿಗೊಬ್ಬರು ಸರಿಸಾಟಿಯಾಗಿ ಜೀವನ ಸಾಗಿಸುತ್ತಿದ್ದರು. ಆದರೆ, ಸೈಬರ್ ವಂಚಕರ ದೌರ್ಜನ್ಯಕ್ಕೆ ಬಲಿಯಾಗಿ ಈ ವೃದ್ದ ದಂಪತಿ ದುರಂತ ಸಾವನ್ನಪ್ಪಿದ್ದಾರೆ.
ಡಿಯಾಂಗೋ ಮಹಾರಾಷ್ಟ್ರ ಸರ್ಕಾರದ ಸೆಕ್ರೆಟ್ರಿ ಕಚೇರಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಬೀಡಿ ಗ್ರಾಮಕ್ಕೆ ಬಂದು ತಮ್ಮ ಪತ್ನಿಯೊಂದಿಗೆ ಸ್ಥಿರವಾಗಿ ನೆಲೆಸಿದ್ದರು. ಎರಡು ಎಕರೆ ಜಮೀನು, ಮನೆ ಮತ್ತು ನಿವೃತ್ತಿ ಪಿಂಚಣಿಯಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದ ಈ ದಂಪತಿ ಆತ್ಮಹತ್ಯೆಯ ದಾರಿಯನ್ನು ಆರಿಸಿಕೊಂಡಿದ್ದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಸ್ಥಳಕ್ಕೆ ಭೇಟಿ ನೀಡಿದ ನಂದಗಡ ಠಾಣೆ ಪೊಲೀಸರು ತನಿಖೆ ನಡೆಸಿದಾಗ, ಎರಡು ಪುಟಗಳ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿನ ಮಾಹಿತಿ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರದ ಬದಲು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ಸ್ಥಳಕ್ಕೆ ಭೇಟಿ ನೀಡಿ, ತನಿಖಾ ತಂಡವನ್ನು ರಚಿಸಿ ತನಿಖೆಗೆ ಸೂಚನೆ ನೀಡಿದ್ದಾರೆ.
ವೃದ್ಧ ದಂಪತಿ ಆತ್ಮಹತ್ಯೆಗೆ ಕಾರಣ ಏನು?
ಡೆತ್ ನೋಟ್ನಲ್ಲಿ ಬರೆದ ಅಂಶಗಳ ಪ್ರಕಾರ, ಈ ದಂಪತಿ ಸೈಬರ್ ವಂಚನೆಗೆ ಒಳಗಾಗಿದ್ದರು. ಕೆಲ ದಿನಗಳ ಹಿಂದೆ ಸೈಬರ್ ವಂಚಕರು ಡಿಯಾಂಗೋಗೆ ವೀಡಿಯೊ ಕಾಲ್ ಮಾಡಿದ್ಧಾರೆ.”ನಿಮ್ಮ ಫೋಟೊಗಳನ್ನು ಬಳಸಿಕೊಂಡು ಸೈಬರ್ ವಂಚನೆ ನಡೆದಿದೆ, ನಿಮ್ಮ ಮೇಲೆ ಕೇಸ್ ದಾಖಲಾಗಿದೆ” ಎಂದು ಹೆದರಿಸಿದ್ದಾರೆ. ಬಳಿಕ ಕರೆಯನ್ನು ಮೇಲಾಧಿಕಾರಿಗಳಿಗೆ ವರ್ಗಾಯಿಸಿ, ಭಯವನ್ನು ಇನ್ನಷ್ಟು ಹೆಚ್ಚಿಸಿದ್ದರು.
“ವಂಚನೆಯ ಹಣವನ್ನು ಕಟ್ಟಿದ್ರೇ ನಿಮ್ಮನ್ನು ರಕ್ಷಿಸುತ್ತೇವೆ” ಎಂದು ಆರಂಭದಲ್ಲಿ 5 ಲಕ್ಷ ‘ರೂಪಾಯಿಗಳ ಬೇಡಿಕೆ ಇಟ್ಟಿದ್ದಾರೆ. ಬ್ಯಾಂಕ್ ಖಾತೆ ಸಂಖ್ಯೆ ನೀಡಿ RTGS ಮೂಲಕ ಹಣ ಪಡೆದಿದ್ದರು. ಹೀಗೆ ಪದೇ ಪದೇ ಕರೆ ಮಾಡಿ ಒಟ್ಟು 50 ಲಕ್ಷ ರೂಪಾಯಿಗಳನ್ನು ವಂಚಿಸಿದ್ದರು. ಚಿನ್ನವನ್ನು ಅಡವಿಟ್ಟು 7 ಲಕ್ಷ ಮತ್ತು ನಿವೃತ್ತಿಯ ಸಂದರ್ಭದಲ್ಲಿ ಬಂದ 40 ಲಕ್ಷ ಸೇರಿ ಒಟ್ಟು 50 ಲಕ್ಷ ರೂಪಾಯಿಗಳನ್ನು ವಂಚಕರು ಸೂಚಿಸಿದಂತೆ ಪಾವತಿಸಿದ್ದರು. ಇದಾದ ಬಳಿಕ ಡಿಯಾಂಗೋ ವಂಚಕರಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದಿದ್ದಾಗ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದರು. ಆದರೂ ಉತ್ತರ ಬಾರದಿದ್ದಾಗ, ಡೆತ್ ನೋಟ್ ಬರೆದಿಟ್ಟು ಜೀವ ಬಿಟ್ಟಿದ್ದಾರೆ.
ಎಸ್ಪಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕೇಸ್ ಅನ್ನು ನಂದಗಡ ಠಾಣೆಯಿಂದ ಜಿಲ್ಲಾ ಸಿಇಎನ್ ಠಾಣೆಗೆ ವರ್ಗಾಯಿಸಿದ್ದಾರೆ. ಸಿಇಎನ್ ಡಿವೈಎಸ್ಪಿ ನೇತೃತ್ವದ ತಂಡವು ಕರೆ ಬಂದ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಆಧಾರದ ಮೇಲೆ ತನಿಖೆ ಆರಂಭಿಸಿದೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಓದಿದವರು ಸಹ ಮೋಸಕ್ಕೆ ಸಿಲುಕುತ್ತಿರುವುದು ಆತಂಕಕಾರಿ. ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಕೂಡ ವಂಚನೆಗೆ ಒಳಗಾಗಿ ಜೀವ ಕಳೆದುಕೊಂಡಿರುವುದು ದುರಂತವೇ ಸರಿ.





