ಚಿತ್ರದುರ್ಗ ಜಿಲ್ಲೆಯ ಕಲ್ಲಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯ ಭರವಸೆ ನೀಡಿ ಮೋಸಗೊಳಿಸಿದ ಘಟನೆ ನಡೆದಿದೆ. ಐದು ತಿಂಗಳ ಗರ್ಭಿಣಿಯಾದ ಯುವತಿಯನ್ನು ಕೈಬಿಟ್ಟು ಯುವಕನೊಬ್ಬ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಗ್ರಾಮದ ಮಹಾಲಿಂಗ ಎಂಬ ಯುವಕನಿಂದ ಯುವತಿಗೆ ಮೋಸವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಯಲ್ಲಿದ್ದರು. ಮಹಾಲಿಂಗ, ಯುವತಿಗೆ ಮದುವೆಯ ಆಸೆ ತೋರಿಸಿ ಲೈಂಗಿಕ ಸಂಬಂಧ ಬೆಳೆಸಿದ್ದ ಎಂದು ತಿಳಿದುಬಂದಿದೆ. ಆದರೆ, ಯುವತಿ ಐದು ತಿಂಗಳ ಗರ್ಭಿಣಿಯಾದಾಗ, ಮಹಾಲಿಂಗ ತನ್ನ ಭರವಸೆಯಿಂದ ಹಿಂದೆ ಸರಿದು ಸಂಪರ್ಕಕ್ಕೆ ಸಿಗದಂತೆ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ, ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನನ್ನು ಮೋಸಗೊಳಿಸಿದ ಮಹಾಲಿಂಗನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೂರು ದಾಖಲಾದ ಕೂಡಲೇ ಮಹಾಲಿಂಗ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತನಿಖೆ ಆರಂಭವಾಗಿದೆ.





