ಬೆಂಗಳೂರು: ಸ್ಯಾಂಡಲ್ವುಡ್ನ ಜನಪ್ರಿಯ ನಟಿ ಕೃಷಿ ತಾಪಂಡ ಅವರಿಗೆ ಗೆಳೆಯ ವೈಶಾಕ್ನ ಅಂತಿಮ ದರ್ಶನದ ಕನಸು ಕೂಡಾ ಈಡೇರಲಿಲ್ಲ. ಚಾಮರಾಜಪೇಟೆಯ (Chamarajapete) ಚಿತಾಗಾರದಲ್ಲಿ ನಡೆದ ವೈಶಾಕ್ನ ಅಂತ್ಯಕ್ರಿಯೆಯ ವೇಳೆ, ನಟಿ ಸ್ವಲ್ಪ ತಡವಾಗಿ ಆಗಮಿಸಿದ ಕಾರಣ ಸ್ನೇಹಿತನ ಮುಖ ನೋಡುವ ಸೌಭಾಗ್ಯ ಸಿಗಲಿಲ್ಲ.
ಕುಟುಂಬಸ್ಥರ ತರಾಟೆಗೆ ಸಿಲುಕಿದ ಕೃಷಿ:
ಅಂತ್ಯಕ್ರಿಯೆಯ ಸ್ಥಳಕ್ಕೆ ಕೃಷಿ ಆಗಮಿಸುವಷ್ಟರಲ್ಲೇ ವಿಧಿವಿಧಾನಗಳು ಈಗಾಗಲೇ ಆರಂಭವಾಗಿದ್ದವು. ಇಂತಹ ವೇಳೆಯಲ್ಲಿ ನಟಿ ಅಲ್ಲಿಗೆ ಧಾವಿಸಿದರು. ಆದರೆ, ವೈಶಾಕ್ನ ಕುಟುಂಬಸ್ಥರು ಕೃಷಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನೀನು ನೋಡೋ ಅವಶ್ಯಕತೆ ಇಲ್ಲ. ಇಲ್ಲಿಂದು ಹೊರಡು” ಎಂದು ಕಟುವಾಗಿ ಮಾತನಾಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ತಮಗೆ ಯಾವುದೇ ಅವಕಾಶ ನೀಡದೆ ಹೊರಟುಹೋಗುವಂತೆ ಸೂಚಿಸಿದಾಗ, ಬೇಸರ ಮತ್ತು ದುಃಖದಿಂದ ಕೃಷಿ ಅಲ್ಲಿಂದ ಹೊರನಡೆದರು.
ಕಾರಿನಲ್ಲಿ ಕುಳಿತ ಕೃಷಿ ತಮ್ಮ ತಲೆಯನ್ನು ಚಚ್ಚಿಕೊಂಡು ಕಣ್ಣೀರಿನಲ್ಲಿ ತೊಳಲಾಡಿದ್ದಾರೆ. ತಮ್ಮ ಆತ್ಮೀಯ ಗೆಳೆಯನ ಕೊನೆಯ ದರ್ಶನವೂ ತಮಗೆ ಸಿಗದೇ ಹೋದ ಬಗ್ಗೆ ಅವರು ವಿಷಾದಿಸಿದ್ದಾರೆ. ಆ ಘಟನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಅಭಿಮಾನಿಗಳು ಕೃಷಿಗೆ ಸಾಂತ್ವನ ಹೇಳುತ್ತಿದ್ದಾರೆ.
ಆಗಿದ್ದೇನು?
ಬೆಂಗಳೂರಿನ ಆರ್ಆರ್ ನಗರದ ಬಿ ಬ್ಲಾಕ್ನ 403ನೇ ಫ್ಲಾಟ್ನಲ್ಲಿ ಉದ್ಯಮಿ ವೈಶಾಖ್ (Vaishakh) ಬುಧವಾರ (ಜೂ.24) ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಶಾಖ್ ಕೃಷಿ ಅವರ ನಿವಾಸದಲ್ಲಿಯೇ ತಂಗಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಇಬ್ಬರ ಬಳಿಯೂ ಅದೇ ಮನೆಯ ಕೀ ಇತ್ತು ಎಂದು ತಿಳಿದುಬಂದಿದೆ. ಸಾವಿಗೂ ಮುನ್ನ ವೈಶಾಖ್ ಅನೇಕ ಬಾರಿ ಕೃಷಿಗೆ ಕರೆ ಮಾಡಿದ್ದರು, ಆದರೆ ಆ ಸಮಯದಲ್ಲಿ ಕೃಷಿ ನೆಲಮಂಗಲದಲ್ಲಿದ್ದ ಕಾರಣ ಕರೆಗಳನ್ನು ಸ್ವೀಕರಿಸಿರಲಿಲ್ಲ.
ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಕೃಷಿಗೆ ಮೆಸೇಜ್ ಕಳುಹಿಸಿದ್ದರು. ನಂತರ ಮನೆಗೆ ಬರುತ್ತಿದ್ದಂತೆ ಈ ವಿಚಾರ ತಿಳಿದ ಕೃಷಿ, ತಕ್ಷಣ ವೈಶಾಖ್ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ, ಅಲ್ಲದೇ ಅವರ ಮೊಬೈಲ್ನಲ್ಲಿಯೂ ಯಾವುದೇ ವಿಡಿಯೋ ದಾಖಲಾಗಿಲ್ಲ. ಈ ಹಿನ್ನೆಲೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.





