ಕನ್ನಡ ಸಿನಿರಂಗದಲ್ಲಿ ಒಂದೇ ಒಂದು ಪದ ಏಳು ವರ್ಷಗಳ ಕಾಲ ಸ್ಟಾರ್ ವಾರ್, ಫ್ಯಾನ್ಸ್ ವಾರ್ಗೆ ಕಿಚ್ಚು ಹಚ್ಚಿತ್ತು ಅಂದ್ರೆ ನಂಬ್ತೀರಾ..? ಟಾಕ್ಸಿಕ್ ಟೀಸರ್ ನೋಡಿ ಕಿಚ್ಚ ಸುದೀಪ್ ಮಾಡಿದ ಒಂದು ಟ್ವೀಟ್, ಅದಕ್ಕೆ ರಾಕಿಭಾಯ್ ಕೊಟ್ಟ ಒಂದೇ ಒಂದು ರಿಪ್ಲೇ.. ಅಂದು ಹೊತ್ತಿದ್ದ ಆ ಬೆಂಕಿಯನ್ನ ನಂದಿಸಿದೆ. ಹಾಗಾದ್ರೆ ಆ ಪದ ಯಾವುದು..? ಆ ದಿನ ಏನಾಗಿತ್ತು..? ಈ ಟ್ವೀಟ್ ಹಿಂದೆ ಇರುವ ಹಳೆಯ ವಿವಾದ ಏನು..?
ಕೊನೆಗೂ ಕನ್ನಡ ಸಿನಿರಂಗದ 7 ವರ್ಷಗಳ ಹಳೆಯ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ‘ಸುದೀಪ್ ಸರ್’ ಅನ್ನೋ ಒಂದು ಪದವೇ ಆಗಿನ ದಿನಗಳಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ಗೆ ಬೆಂಕಿ ಹಚ್ಚಿತ್ತು. ಯಶ್–ಸುದೀಪ್ ನಡುವೆ ವೈಯಕ್ತಿಕವಾಗಿ ಯಾವತ್ತೂ ಬಿರುಕು ಇರಲಿಲ್ಲ ಅನ್ನೋದು ಗೊತ್ತಿದ್ದರೂ, ಅಭಿಮಾನಿಗಳ ಭಾವನೆ ಮಾತ್ರ ಬಿರುಸಾಗಿ ಸ್ಫೋಟಗೊಂಡಿತ್ತು. ಈಗ ಟಾಕ್ಸಿಕ್ ಟೀಸರ್ ಸಂಭ್ರಮದಲ್ಲಿ ನಡೆದ ಟ್ವಿಟ್ಟರ್ ಸಂವಾದ ಆ ಹಳೆಯ ಕಥೆಗೆ ಮತ್ತೆ ಜೀವ ಕೊಟ್ಟಿದೆ.

ಸೀನಿಯರ್ ಸ್ಟಾರ್ಸ್ನಿಂದ ರಾಕಿಭಾಯ್ ಯಶ್ ಕಲಿತದ್ದೇನು?
7 ವರ್ಷದ ಹಿಂದಿನ ಪರಸ್ಪರ ಗೌರವ ವಿವಾದ ಮತ್ತೆ ಮುನ್ನೆಲೆಗೆ

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಟಾಕ್ಸಿಕ್ ಟೀಸರ್ ಕನ್ನಡ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಟಾಕ್ಸಿಕ್ ಟೀಸರ್ ನೋಡಿ ಕಿಚ್ಚ ಸುದೀಪ್ ಮನಸಾರೆ ಮೆಚ್ಚಿಕೊಂಡಿದ್ದರು. “ಅಲೆಗಳ ವಿರುದ್ಧ ಸಾಗಲು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕರೆದೊಯ್ಯಲಿ” ಎಂಬ ಸುದೀಪ್ ಸಾಲುಗಳು ಯಶ್ಗೆ ಸಿಕ್ಕ ಸಿನಿ ಇಂಡಸ್ಟ್ರಿಯ ಸೀನಿಯರ್ ಸೀಲ್ ಆಫ್ ಅಪ್ರೂವಲ್ ಅಂತಲೇ ಫ್ಯಾನ್ಸ್ ನೋಡುತ್ತಿದ್ದಾರೆ.

ಸುದೀಪ್ ಟ್ವೀಟ್ಗೆ ಯಶ್ ನೀಡಿದ ರಿಪ್ಲೇ ಈಗ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದೆ. ಧನ್ಯವಾದಗಳು, ಸರ್.. ನಿಮ್ಮನ್ನು ಸೇರಿ ನಮ್ಮ ಸೀನಿಯರ್ಸ್ ಯಿಂದ ನಾನು ಕಲಿತ ಒಂದು ವಿಷಯ ಎಂದರೆ, ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡಬೇಕುಎಂದು ಯಶ್ ರೀ ಟ್ವೀಟ್ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಇದೇ ‘ಸರ್’ ಪದ ಇಲ್ಲದೆ ಸುದೀಪ್ ಎಂದು ನೇರವಾಗಿ ಹೆಸರು ಕರೀತೀರಾ ಸುದೀಪ್ ನಿಮಗಿಂತ ಸೀನಿಯರ್ ಮರ್ಯಾದೆ ಕೊಡಿ ಎಂದು ಸುದೀಪಿಯನ್ಸ್ ದೊಡ್ಡ ಗಲಾಟೆ ಮಾಡಿದ್ರು. ಇದೀಗ ಕೊನೆಗೂ ಯಶ್ ‘ಸುದೀಪ್ ಸರ್’ ಅಂದ್ಬಿಟ್ರು ಎಂದು ಹಳೆಯ ವೀಡಿಯೋಗಳನ್ನು ಟ್ಯಾಗ್ ಮಾಡಿ ಟ್ರೋಲ್, ಮೀಮ್ಗಳ ಮಹಾಪೂರ ಶುರುವಾಗಿದೆ.

ಯಶ್-ಸುದೀಪ್ ಫ್ಯಾನ್ಸ್ ವಾರ್ಗೆ ಕಾರಣವಾಗಿತ್ತು ಆ ಪದ..!
ಕೊನೆಗೂ ‘ಸುದೀಪ್ ಸರ್’ ಅಂದ್ಬಿಟ್ರು ರಾಕಿಂಗ್ ಸ್ಟಾರ್ ಯಶ್

2018ರ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಚಾಲೆಂಜ್ನಲ್ಲಿ ಸುದೀಪ್ ನೀಡಿದ ಚಾಲೆಂಜ್ಗೆ ಯಶ್ ಟ್ವಿಸ್ಟ್ ಕೊಟ್ಟು, ತಮ್ಮ ಸ್ನೇಹಿತನಿಂದ ವರ್ಕೌಟ್ ಮಾಡಿಸಿ ವೀಡಿಯೋ ಪೋಸ್ಟ್ ಮಾಡಿದ್ರು. ಆದರೆ ವೀಡಿಯೋದಲ್ಲಿ ಹಾಯ್ ಸುದೀಪ್ ಎಂದು ಕರೆದಿದ್ದೇ ತಪ್ಪು. ಸರ್ ಅನ್ನಬೇಕಿತ್ತು ಅನ್ನೋ ಒಂದೇ ಕಾರಣಕ್ಕೆ ಸುದೀಪಿಯನ್ಸ್ ಆಕ್ರೋಶ ವ್ಯಕ್ತಪಡಿಸಿದ್ರು. ವಿವಾದ ಫ್ಯಾನ್ಸ್ ವಾರ್ ಆಗಿ ಮಾರ್ಪಟ್ಟಿತ್ತು. ಸುದೀಪ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ 7 ವರ್ಷಗಳ ನಂತ್ರ ಒಂದು ಟ್ವೀಟ್.. ಒಂದು ರಿಪ್ಲೇ ಮೂಲಕ ಆ ಕಥೆ ಮತ್ತೆ ಚರ್ಚೆಗೆ ಬಂದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





