ವಿನಯ್ ಗೌಡ.. ಬಿಗ್ ಬಾಸ್ ಸೀಸನ್-10ರಿಂದ ಲೈಮ್ ಲೈಟ್ ಗೆ ಬಂದ ಪ್ರತಿಭಾವಂತ ಕಲಾವಿದ. ಇದಕ್ಕೂ ಮುನ್ನ ಹರ ಹರ ಮಹಾದೇವ, ಶಿವ, ಜೂ ಹನುಮಾನ್, ರಾಕೆಟ್, ಬಯಸದೆ ಬಳಿ ಬಂದೆ ಅನ್ನೋ ಸಾಲು ಸಾಲು ಸೀರಿಯಲ್ ಗಳಲ್ಲಿ ನಟಿಸಿದ್ರು ವಿನಯ್ ಗೌಡ. ಕಿರುತೆರೆಗಷ್ಟೇ ಸೀಮಿತ ಆಗದ ವಿನಯ್, ಬೆಳ್ಳಿತೆರೆಯಲ್ಲೂ ಸದ್ದು ಮಾಡಿದ್ರು. ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್, ಧ್ರುವ ಸರ್ಜಾ ನಟನೆಯ ಪೊಗರು, ಮಾರ್ಟಿನ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು. ಆದ್ರೆ ಅದ್ಯಾವುದರಿಂದಲೂ ಸಿಗದ ನೇಮು, ಫೇಮು, ಫ್ಯಾನ್ ಫಾಲೋಯಿಂಗ್ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಸಿಕ್ಕಿತ್ತು. ಅಲ್ಲಿ ಅವರು ಆಡಿದ ಅಟ, ಅವರ ಬೇಸ್ ವಾಯ್ಸ್, ಆನೆ ಡೈಲಾಗ್ ಹೀಗೆ ಎಲ್ಲವೂ ಆತನಿಗೆ ಆನೆ ವಿನಯ್ ಅಂತಲೇ ಹೆಸರು ತಂದುಕೊಡ್ತು.
ಹಿರಿತೆರೆಯಲ್ಲಿ ದೊಡ್ಡ ದೊಡ್ಡ ನಿರ್ದೇಶಕರುಗಳು ಹಾಗೂ ಸ್ಟಾರ್ ಗಳೆಲ್ಲಾ ದೇಸಿ ಪ್ರತಿಭೆ ವಿನಯ್ ಗೌಡಗೆ ಅವಕಾಶ ಕೊಡೋಣ ಅಂತ ಈತನ ಕಡೆ ತಿರುಗಿ ನೋಡಿದ್ರು. ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳಲ್ಲಿ ಖಳನಾಯಕನಾಗಿ ಒಳ್ಳೆಯ ಆಫರ್ ಗಳನ್ನೇ ಕೊಟ್ಟರು. ಈಗಾಗ್ಲೇ ಬಿಗ್ ಬಾಸ್ ಚಂದನ್ ಗೌಡ ನಟಿಸಿ, ನಿರ್ದೇಶೀಸುತ್ತಿರೋ ಫ್ಲರ್ಟ್ ಅನ್ನೋ ಚಿತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ ವಿನಯ್ ಗೌಡ. ಆ ಸಿನಿಮಾ ಕೊನೆಯ ಹಂತ ತಲುಪಿದ್ದು, ಇನ್ನೊಂದೆರಡು ದಿನ ಶೂಟಿಂಗ್ ಆದ್ರೆ ಕುಂಬಳಕಾಯಿ ಒಡೆಯಲಿದೆ.
ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ತಯಾರಾಗ್ತಿರೋ ಬಲರಾಮನ ದಿನಗಳು ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಎದುರು ಖಡಕ್ ಖಳನಾಯಕ ಇದೇ ವಿನಯ್ ಗೌಡ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದ್ದು, ಇನ್ನೂ ಹೆಸರಿಡದ ಉಪೇಂದ್ರ ನಟಿಸಲಿರೋ ಸಿನಿಮಾಗೆ ವಿನಯ್ ಗೌಡನೇ ವಿಲನ್ ಎನ್ನಲಾಗ್ತಿದೆ. ಅಲ್ಲದೆ, ಬಾದ್ ಷಾ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಿಲ್ಲ ರಂಗ ಭಾಷಗೂ ಈಗಾಗ್ಲೇ ಆನೆ ವಿನಯ್ ಖಳನಟ ಅನ್ನೋದು ಗೊತ್ತೇಯಿದೆ. ಸದ್ಯ ಚಿತ್ರೀಕರಣ ಆಗ್ತಿರೋ ದರ್ಶನ್ ನಟನೆಯ ಡೆವಿಲ್ ದಿ ಹೀರೋನಲ್ಲಿ ಒನ್ಸ್ ಅಗೈನ್ ವಿನಯ್ ಗೌಡ ಖಡಕ್ ಖಳನಟ. ಹೀಗೆಲ್ಲಾ ಆಫರ್ ಗಳ ಮೇಲೆ ಆಫರ್ಸ್ ಇರುವಾಗ ಲೈಫ್ ನಲ್ಲಿ ಹೇಗಿರಬಹುದಿತ್ತು ವಿನಯ್ ಗೌಡ ಅಲ್ಲವೇ..? ಏನು ಮಾಡೋದು ವಿಧಿಯ ಆಟ ಬಲ್ಲವಱರು..? ತನ್ನ ಲೈಫ್ ಗೆ ತಾನೇ ವಿಲನ್ ಆಗಿಬಿಟ್ರು ವಿನಯ್ ಗೌಡ.
ಹೌದು.. ಇತ್ತೀಚೆಗೆ ರಿಯಲ್ ಮಚ್ಚು ಹಿಡಿದು ರೀಲ್ಸ್ ಮಾಡೋಕೆ ಹೋಗಿ ಖಾಕಿ ಬಲೆಗೆ ತಗಲಾಕ್ಕೊಂಡಿರೋ ವಿನಯ್ ಗೌಡ, ಸದ್ಯ ಕಾನೂನಿನ ಸಂಕೋಲೆಯಲ್ಲಿ ಸಿಲುಕಿ, ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಪುಂಡಾಟ ಮೆರೆದರೆ ಪೊಲೀಸರು ಮಟ್ಟ ಹಾಕದೆ ಬಿಡೋದುಂಟೇ..? ದರ್ಶನ್ ಅಂತಹ ಘಟಾನುಘಟಿಯನ್ನೇ ಬಿಟ್ಟಿಲ್ಲ ಖಾಕಿ & ಕಾನೂನು. ಇನ್ನು ವಿನಯ್ ಗೌಡ ಯಾವ ಲೆಕ್ಕಾ ಅಲ್ಲವೇ..? ಶಸ್ತ್ರಾಸ್ತ್ರ ಕಾಯ್ದೆಯಡಿ ಕಾನೂನು ಸಮರ ಎದುರಿಸುತ್ತಿದ್ದು, ರಿಯಲ್ ಮಚ್ಚು ಬಚ್ಚಿಟ್ಟು, ಫೈಬರ್ ಮಚ್ಚು ಕೊಟ್ಟು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ನೋಡಿದ್ದಾರೆ. ಸಾಕ್ಷ್ಯನಾಶ ಕೇಸ್ ದಾಖಲಿಸಿಕೊಂಡು, ಮತ್ತೆ ಅರೆಸ್ಟ್ ಮಾಡಿ, ಸ್ಥಳ ಮಹಜರು ಮಾಡಿ ಕೋರ್ಟ್ ಮುಂದೆ ಪ್ರೊಡ್ಯೂಸ್ ಮಾಡಿದೆ ಖಾಕಿ ಪಡೆ.
ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಗೆ ಹೆಡೆಮುರಿ ಕಟ್ಟಿದ್ದು ಎಸಿಪಿ ಚಂದನ್. ಸದ್ಯ ದರ್ಶನ್ ಅಭಿಮಾನಿಗಳು ಅಂತ ಹೇಳಿಕೊಂಡು ದೊಡ್ಡ ಎಡವಟ್ ಮಾಡ್ಕೊಂಡಿರೋ ರಜತ್ ಹಾಗೂ ವಿನಯ್ ಗೌಡಗೂ ಅದೇ ಎಸಿಪಿ ಚಂದನ್ ಕುಮಾರ್ ಪಾಠ ಕಲಿಸೋಕೆ ಮುಂದಾಗಿದ್ದಾರೆ. ಇದು ನಿಜಕ್ಕೂ ಸ್ಟಾರ್ಸ್ ಅಂತ ಲಂಗು ಲಗಾಮು ಇಲ್ಲದೆ ಮೆರೆಯೋ ಪ್ರತಿಯೊಬ್ಬ ಕಲಾವಿದನಿಗೂ ಎಚ್ಚರಿಕೆ ಗಂಟೆಯಾಗಿದೆ. ಇದ್ರಿಂದ ಉಳಿದವರು ಎಚ್ಚೆತ್ತುಕೊಂಡ್ರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ.