ನಟ ದರ್ಶನ್ ಜೈಲಿನಲ್ಲಿರುವ ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬದ ಹೊಣೆಗಾರಿಕೆಯನ್ನು ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿಭಾಯಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಪತಿಯನ್ನು ಜೈಲಿನಿಂದ ಹೊರಗೆ ತರಲು ಕಾನೂನು ಹೋರಾಟದಿಂದ ಹಿಡಿದು ಕುಟುಂಬದ ನಿರ್ವಹಣೆವರೆಗೂ ಹಲವು ಜವಾಬ್ದಾರಿಗಳನ್ನು ಅವರು ಹೊತ್ತುಕೊಂಡಿದ್ದಾರೆ. ಇದೇ ನಡುವೆ ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ಸ್ಟೋರಿ ಈಗ ಹೊಸ ಚರ್ಚೆಗೆ ಕಾರಣವಾಗಿದೆ.
- ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್
- ಚರ್ಚೆಗೆ ಕಾರಣವಾದ “ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ…” ಸಾಲು
- ಈ ಪೋಸ್ಟ್ ಯಾರಿಗೋ.. ಪರೋಕ್ಷವಾಗಿ ಟಾಂಗ್ ಕೊಟ್ರಾ..ವಿಜಯಲಕ್ಷ್ಮಿ ದರ್ಶನ್?
- ಧನ್ವೀರ್ ಗೌಡ ಮತ್ತು ದರ್ಶನ್ ಕುಟುಂಬದ ನಡುವೆ ಮನಸ್ತಾಪ ಉಂಟಾಗಿದೆಯೇ?
“ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ” ಎಂಬ ಸಾಲುಗಳನ್ನು ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವುದಿಲ್ಲ. ವಿಶೇಷವಾಗಿ ಯಾವುದೇ ಉಲ್ಲೇಖವಿಲ್ಲದೆ ಇಂತಹ ಅರ್ಥಪೂರ್ಣ ಸಾಲುಗಳನ್ನು ಹಂಚಿಕೊಳ್ಳುವುದು ಅಪರೂಪ. ಅದಕ್ಕಾಗಿಯೇ ಈ ಪೋಸ್ಟ್ ಯಾರಿಗೋ ಪರೋಕ್ಷವಾಗಿ ಸಂದೇಶ ರವಾನಿಸುವ ಉದ್ದೇಶದಿಂದ ಹಾಕಲಾಗಿದೆ ಎಂಬ ಅನುಮಾನಗಳು ಮೂಡಿವೆ.
ಸಿನಿ ವಲಯದಲ್ಲಿ ಹರಿದಾಡುತ್ತಿರುವ ಕೆಲವು ಮಾತುಗಳ ಪ್ರಕಾರ, ದರ್ಶನ್ ಅವರಿಗೆ ಆಪ್ತರಾಗಿದ್ದ ನಟ ಧನ್ವೀರ್ ಗೌಡ ಹಾಗೂ ದರ್ಶನ್ ಕುಟುಂಬದ ನಡುವೆ ಇತ್ತೀಚೆಗೆ ಸಣ್ಣ ಮಟ್ಟಿನ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದೆ. ದರ್ಶನ್ ಜೈಲು ಸೇರಿದ ನಂತರ ವಿಜಯಲಕ್ಷ್ಮಿ ಅವರಿಗೆ ಬೆಂಬಲವಾಗಿ ನಿಂತವರಲ್ಲಿ ಧನ್ವೀರ್ ಹೆಸರು ಕೂಡ ಕೇಳಿಬಂದಿತ್ತು. ಕುಟುಂಬದ ಆತ್ಮೀಯರಂತೆ ವರ್ತಿಸಿದ್ದ ಧನ್ವೀರ್, ಈ ಸಂಕಷ್ಟದ ಸಮಯದಲ್ಲಿ ಬೆಂಬಲ ನೀಡಿದ್ದರು ಎಂಬ ಮಾತುಗಳು ಇವೆ. ಆದರೆ ಈಗ ಅವರ ಮತ್ತು ದರ್ಶನ್ ಕುಟುಂಬದ ನಡುವಿನ ಸಂಬಂಧದಲ್ಲಿ ಬದಲಾವಣೆ ಕಂಡು ಬಂದಿದೆಯೇ ಎಂಬ ಪ್ರಶ್ನೆ ಎದ್ದಿದೆ.
ವಿಜಯಲಕ್ಷ್ಮಿ ಹಂಚಿಕೊಂಡಿರುವ ಈ ಸಾಲು ಧನ್ವೀರ್ಗೇ ಟಾಂಗ್ ಆಗಿದೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅಥವಾ ಧನ್ವೀರ್ ಯಾರೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಎಲ್ಲವೂ ಸದ್ಯಕ್ಕೆ ಊಹಾಪೋಹಗಳ ಮಟ್ಟದಲ್ಲೇ ಇದೆ.
ಆದರೂ ವಿಜಯಲಕ್ಷ್ಮಿ ಅವರ ಪೋಸ್ಟ್ ಟೈಮಿಂಗ್ ಮತ್ತು ಅದರ ಅರ್ಥಪೂರ್ಣ ಸಾಲು ಹಲವು ಅನುಮಾನಗಳಿಗೆ ಕಾರಣವಾಗಿದೆ. ದರ್ಶನ್ ಕುಟುಂಬಕ್ಕೆ ಹಿಂದೆ ಆಪ್ತರಾಗಿದ್ದ ಯಾರಿಗಾದರೂ ಈ ಸಂದೇಶ ಇರಬಹುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಧನ್ವೀರ್ ಈ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾರಾ? ಅಥವಾ ಮೌನವೇ ಉಳಿಸಿಕೊಳ್ಳುತ್ತಾರಾ? ಎಂಬ ಕುತೂಹಲವೂ ಹೆಚ್ಚಾಗಿದೆ.
ಒಟ್ಟಿನಲ್ಲಿ, ಒಂದು ಚಿಕ್ಕ ಇನ್ಸ್ಟಾಗ್ರಾಂ ಸ್ಟೋರಿ ಇದೀಗ ದರ್ಶನ್ ಕುಟುಂಬ, ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಸಂಬಂಧಗಳ ಬಗ್ಗೆ ಹೊಸ ಚರ್ಚೆಗೆ ವೇದಿಕೆ ಸಿದ್ಧಪಡಿಸಿದೆ. ಆದರೆ ಸತ್ಯಾಸತ್ಯತೆ ಏನು ಎಂಬುದು ಸಂಬಂಧಪಟ್ಟವರ ಅಧಿಕೃತ ಪ್ರತಿಕ್ರಿಯೆಯ ನಂತರವೇ ಸ್ಪಷ್ಟವಾಗಲಿದೆ.





