ದಕ್ಷಿಣ ಭಾರತದ ಮೋಸ್ಟ್ ಅಟ್ರಾಕ್ಟಿವ್ ಜೋಡಿ ಎನಿಸಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆಯ ಸಂಭ್ರಮದ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಅಭಿಮಾನಿಯೊಬ್ಬಳ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆ ಪುಟ್ಟ ಬಾಲಕಿ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ವಿಜಯ್ ನೀಡಿದ ಹೃದಯಸ್ಪರ್ಶಿ ಉತ್ತರ ಈಗ ಎಲ್ಲರ ಮನ ಗೆದ್ದಿದೆ.
ವೈರಲ್ ಆದ ಆ ಮುದ್ದಾದ ಪ್ರಶ್ನೆ ಏನು ?
ವಿಜಯ್ ಮತ್ತು ರಶ್ಮಿಕಾ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಂತೆ, ಪುಟ್ಟ ಅಭಿಮಾನಿಯೊಬ್ಬಳು ತನ್ನ ಮುಗ್ಧತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಳು. ಆಕೆ ವಿಡಿಯೋವೊಂದರಲ್ಲಿ, ನಾನು ನಿಮ್ಮ ದೊಡ್ಡ ಫ್ಯಾನ್ ಅಲ್ವಾ ? ನಿಮ್ಮ ಮದುವೆಗೆ ನನ್ನನ್ನು ಯಾಕೆ ಇನ್ವೈಟ್ ಮಾಡಿಲ್ಲ ? ನಮ್ಮ ಕಥೆ ಏನು ? ಎಂದು ತುಂಬಾ ಮುದ್ದಾಗಿ ವಿಜಯ್ ದೇವರಕೊಂಡ ಅವರನ್ನು ಪ್ರಶ್ನಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಟ ಆಗಿತ್ತು.
ವಿಜಯ್ ದೇವರಕೊಂಡ ಅವರ ‘ಹಾರ್ಟ್ ಟಚಿಂಗ್’ ಪ್ರತಿಕ್ರಿಯೆ
ತನ್ನ ಅಭಿಮಾನಿಯ ಈ ಮುಗ್ಧ ಪ್ರಶ್ನೆ ನಟ ವಿಜಯ್ ಅವರ ಗಮನಕ್ಕೆ ಬಂದ ತಕ್ಷಣ, ವಿಜಯ್ ಆ ಬಾಲಕಿಯನ್ನು ‘ಸ್ವೀಟಿ’ ಎಂದು ಸಂಬೋಧಿಸಿ, ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ.
“ಸ್ವೀಟಿ, ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತಿದ್ದೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳು ಯಾವುವು ಎಂದು ತಿಳಿಸು. ಎಲ್ಲವನ್ನೂ ಮನೆಯಲ್ಲೇ ಸಿದ್ಧಪಡಿಸುತ್ತೇನೆ. ನಾವೆಲ್ಲರೂ ಕುಳಿತು ಒಟ್ಟಾಗಿ ಊಟ ಮಾಡೋಣ,” ಎಂದು ವಿಜಯ್ ರಿಪ್ಲೈ ಮಾಡಿದ್ದಾರೆ.ರಶ್ಮಿಕಾ ಮಂದಣ್ಣ ಕೂಡ ಈ ವಿಡಿಯೋವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಅದ್ದೂರಿ ಮದುವೆ
ಫೆಬ್ರವರಿ 26 ರಂದು ಉದಯಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿತ್ತು. ಮದುವೆಯ ನಂತರ ಹೈದರಾಬಾದ್ನಲ್ಲಿ ನಡೆದ ಅದ್ಧೂರಿ ರಿಸೆಪ್ಷನ್ನಲ್ಲಿ ಚಿತ್ರರಂಗದ ತಾರೆಯರು ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ವಿಶೇಷವೆಂದರೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದೇವರಕೊಂಡ ನಿವಾಸಕ್ಕೆ ಭೇಟಿ ನೀಡಿ ನವದಂಪತಿಗಳನ್ನು ಆಶೀರ್ವದಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿ
ನಟಿ ರಶ್ಮಿಕಾ ಮಂದಣ್ಣ ಅವರು ಮದುವೆಗೆ ಮುನ್ನ ದೇಶದ ಪ್ರಮುಖ ನಾಯಕರನ್ನು ಭೇಟಿಯಾಗಿದ್ದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಚರ್ಚಿಸಿದ್ದನ್ನು ಅವರು ವಿಶೇಷವಾಗಿ ನೆನೆದಿದ್ದಾರೆ. ಪ್ರಧಾನಿಯವರು ರಶ್ಮಿಕಾ ಅವರ ಪೋಷಕರಿಗೆ ಬರೆದ ಪತ್ರ ತಮ್ಮ ಜೀವನದ ಅಮೂಲ್ಯ ಆಸ್ತಿ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಗಣೇಶನ ವಿಗ್ರಹವು ತಮ್ಮ ಮನೆಯಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ರಶ್ಮಿಕಾ ಧನ್ಯವಾದ ಅರ್ಪಿಸಿದ್ದಾರೆ.





