ಸೆಲೆಬ್ರಿಟಿಗಳಿಗೆ ಜ್ಯೋತಿಷ್ಯ ಹೇಳುವ ಮೂಲಕ ಪ್ರಖ್ಯಾತಿಯಾದ ಆಂಧ್ರ ಪ್ರದೇಶದ ಜ್ಯೋತಿಷಿ ವೇಣುಸ್ವಾಮಿ ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಪ್ರಭಾಸ್, ಸಮಂತಾ ಮತ್ತು ವಿಜಯ್ ದೇವರಕೊಂಡ ಇವರುಗಳು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಭವಿಷ್ಯವನ್ನು ಹೇಳಿದ್ದು, ಈ ಕುರಿತು ಅವರ ಆಡಿಯೋ ವೈರಲ್ ಆಗಿದೆ.
ವೇಣುಸ್ವಾಮಿ ಅವರು ತನ್ನ ಭವಿಷ್ಯವಾಣಿ ಮೂಲಕ ಹೀರೋ ಮತ್ತು ಹೀರೋಯಿನ್ಗಳ ಜೀವಕ್ಕೆ ಸಂಬಂಧಿಸಿದಂತೆ ಮಾತಾಡಿದ್ದು, ಅಭಿಮಾನಿಗಳನ್ನು ಆಕ್ರೋಶಕ್ಕೆ ಗುರಿಮಾಡಿದೆ. ‘ಒಬ್ಬ ಹೀರೋ, ಒಬ್ಬ ಹೀರೋಯಿನ್ ಸತ್ತೋಗುತ್ತಾರೆ. ಒಬ್ಬರು ಸೂಸೈಡ್ ಮಾಡ್ಕೋತಾರೆ’ ಎಂದು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ರು.
ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ಖ್ಯಾತರಾಗಿದ್ದಾರೆ. ಆದರೆ, ಅವುಗಳಲ್ಲಿ ಕೆಲವು ನಿಜವಾಗಿದ್ದರೆ, ಕೆಲವು ಸುಳ್ಳಾಗಿವೆ. ಇದರಿಂದಾಗಿ ಇನ್ಮೇಲೆ ಸೆಲೆಬ್ರಿಟಿಗಳಿಗೆ ಭವಿಷ್ಯ ಹೇಳಲ್ಲ ಎಂದು ಹೇಳಿದ್ದರೂ, ಈಗ ಮತ್ತೆ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಆಶ್ಚರ್ಯಕಾರ ಸಂಗತಿ.
ವೇಣು ಸ್ವಾಮಿಯವರು ಹೇಳಿದ ತಪ್ಪು ಭವಿಷ್ಯಗಳು ಯಾವುವು ಎಂಬುದನ್ನು ನೋಡುವುದಾದರೆ. ಹಲವು ಸ್ಟಾರ್ಗಳ ಡಿವೋರ್ಸ್ ಮತ್ತು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ವೇಣುಸ್ವಾಮಿ ಜ್ಯೋತಿಷ್ಯವನ್ನು ನುಡಿದಿದ್ದಾರೆ. ಟಾಲಿವುಡ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯ ನಿಜವಾಗಿತ್ತು.
ಪ್ರಭಾಸ್ ಬಗ್ಗೆ ಮಾತನಾಡುವ ಮೂಲಕ ವೇಣು ಸ್ವಾಮಿ ದೊಡ್ಡ ತಪ್ಪು ಮಾಡಿದ್ದಾರೆ. ಏಕೆಂದರೆ, ಪ್ರಭಾಸ್ ಸಿನಿ ಕೆರಿಯರ್ ಮುಗಿದು ಹೋಗುತ್ತದೆ ಎಂದಿದ್ದರು. ಈ ಭವಿಷ್ಯ ನಿಜವಾಗಬಹುದು ಅಂತ ಅಭಿಮಾನಿಗಳೆಲ್ಲರೂ ಅದರ ಬಗ್ಗೆ ಚಿಂತಿಸುತ್ತಿದ್ದರು. ಆದರೆ, ಸಲಾರ್ ಯಶಸ್ಸಿನ ನಂತರ ಪ್ರಭಾಸ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ ಮತ್ತು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿಗೆ ವೇಣುಸ್ವಾಮಿ ಹೇಳಿದ ಈ ಭವಿಷ್ಯ ಸುಳ್ಳಾಗಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಟಿಆರ್ಎಸ್ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿ ಜಗನ್ ಸರ್ಕಾರ ಬರಲಿದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಆದರೆ, ಈ ಭವಿಷ್ಯ ಸಂಪೂರ್ಣವಾಗಿ ಸುಳ್ಳು ಎಂದು ಚುನಾವಣಾ ಫಲಿತಾಂಶ ಸಾಬೀತು ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆಂಧ್ರದಲ್ಲಿ ಸಮ್ಮಿಶ್ರ ಅಧಿಕಾರಕ್ಕೆ ಬಂದಿದ್ದು ಈ ಭವಿಷ್ಯ ಕೂಡ ಸುಳ್ಳಾಗಿದೆ.
ಇತ್ತೀಚಿಗೆ ಮುಕ್ತಾಯವಾದ ಐಪಿಎಲ್ ಸೀಸನ್ನಲ್ಲಿ ಎಸ್ಆರ್ಎಚ್ ಉತ್ತಮವಾಗಿ ಆಡುವುದನ್ನು ನೋಡಿ ಕಪ್ ಗೆಲ್ಲಲಿದೆ ಎಂದು ಹೇಳಿದ್ದರು. ಆದರೆ, ಎಸ್ಆರ್ಎಚ್ ಫೈನಲ್ನಲ್ಲಿ ಕೆಕೆಆರ್ ವಿರುದ್ಧ ಸೋಲುಂಡಿತು. ಅದಕ್ಕೂ ಮುನ್ನ ವೇಣು ಸ್ವಾಮಿ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿದ್ದರು. ಆದರೆ, ಅದೂ ಕೂಡ ಕೈಗೂಡಲಿಲ್ಲ. ವೇಣು ಸ್ವಾಮಿ ಹೇಳಿದ ಈ ಭವಿಷ್ಯಗಳು ಇದೀಗ ಸುಳ್ಳಾಗಿವೆ.
ಇದೀಗ ಮತ್ತೊಮ್ಮೆ ಭವಿಷ್ಯ ಹೇಳುವ ಮೂಲಕ ಮುನ್ನೆಲೆಗೆ ಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಭಾಸ್, ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





