ಕರ್ನಾಟಕ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ನಡೆಯುವ ಮುನ್ನವೇ ಬಿ. ನಾಗೇಂದ್ರ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಕಂಡುಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ನಾಗೇಂದ್ರ ಅವರು ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಅನುಮತಿ ಪಡೆಯದೆ ದೆಹಲಿಗೆ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಇದೀಗ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಹಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಕರ್ನಾಟಕದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಇದೀಗ ಇದೇ ಷರತ್ತನ್ನು ಉಲ್ಲಂಘಿಸಿ ನಾಗೇಂದ್ರ ಅವರು ದೆಹಲಿಗೆ ತೆರಳಿದ್ದಾರೆ ಎಂದು ಇ.ಡಿ. ಆರೋಪಿಸಿದೆ.
ಇ.ಡಿ. ಅಧಿಕಾರಿಗಳಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಜುಲೈ 26ರಂದು ಮಧ್ಯಾಹ್ನ 1.55ರ ಇಂಡಿಗೋ ವಿಮಾನ 6E840 ಮೂಲಕ ನಾಗೇಂದ್ರ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳು, ಶಿಷ್ಟಾಚಾರ ವಿಭಾಗದ ರಿಜಿಸ್ಟರ್ಗಳು ಹಾಗೂ ವಿಮಾನಯಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ. ಪರಿಶೀಲಿಸುತ್ತಿದೆ.
ನಾಗೇಂದ್ರ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದರು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಜುಲೈ 17ರಂದು ದೆಹಲಿಯ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಎನ್.ಎಚ್. ಕೋನರಡ್ಡಿ ಅವರೊಂದಿಗೆ ನಾಗೇಂದ್ರ ಕಾಣಿಸಿಕೊಂಡಿದ್ದರು. ಆದರೆ, ಆ ದಿನದ ದೆಹಲಿ ಪ್ರವಾಸಕ್ಕೆ ನ್ಯಾಯಾಲಯದ ಅನುಮತಿ ಇತ್ತು ಎನ್ನಲಾಗಿದೆ.
ಮೂರು ಬಾರಿ ಪ್ರವಾಸಕ್ಕೆ ಅನುಮತಿ
ನಾಗೇಂದ್ರ ಅವರು ಕರ್ನಾಟಕದ ಹೊರಗೆ ತೆರಳಲು ನ್ಯಾಯಾಲಯ ಈವರೆಗೆ ಮೂರು ಅವಧಿಗಳಿಗೆ ಅನುಮತಿ ನೀಡಿತ್ತು. 2026ರ ಏಪ್ರಿಲ್ 26ರಿಂದ ಜೂನ್ 2ರವರೆಗೆ, ಜೂನ್ 11ರಿಂದ ಜುಲೈ 7ರವರೆಗೆ ಹಾಗೂ ಜುಲೈ 16ರಿಂದ ಜುಲೈ 25ರವರೆಗೆ ರಾಜ್ಯದಿಂದ ಹೊರಗೆ ತೆರಳಲು ಅನುಮತಿ ನೀಡಲಾಗಿತ್ತು.
ಆದರೆ ಜುಲೈ 15 ಮತ್ತು ಜುಲೈ 26ರಂದು ಅನುಮತಿಯಿಲ್ಲದೆ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೀಗ ಇ.ಡಿ.ಗೆ ಲಭ್ಯವಾಗಿದೆ. ಈ ನಡುವೆ ಜುಲೈ 26ರಿಂದ ಆಗಸ್ಟ್ 10ರವರೆಗೆ ರಾಜ್ಯದ ಹೊರಗೆ ತೆರಳಲು ಅನುಮತಿ ಕೋರಿ ನಾಗೇಂದ್ರ ಅವರು ಜುಲೈ 23ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಇ.ಡಿ. ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ತನಿಖೆ ವಿಳಂಬಗೊಳಿಸುವ ಉದ್ದೇಶದಿಂದ ಪದೇಪದೇ ಪ್ರವಾಸಕ್ಕೆ ಅನುಮತಿ ಕೇಳಲಾಗುತ್ತಿದೆ. ನ್ಯಾಯಾಲಯ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇ.ಡಿ. ಸಮನ್ಸ್ಗೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ದೆಹಲಿ ಪ್ರವಾಸಕ್ಕೆ ಸೂಕ್ತ ಕಾರಣ ಅಥವಾ ಪ್ರಮುಖರ ಆಹ್ವಾನದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಇ.ಡಿ. ನ್ಯಾಯಾಲಯದ ಮುಂದೆ ವಾದಿಸಿತ್ತು.
ಇ.ಡಿ. ವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಆಗಸ್ಟ್ 4ರಂದು ನಾಗೇಂದ್ರ ಅವರ ದೆಹಲಿ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಇದೀಗ ಜಾಮೀನು ಷರತ್ತು ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಹಾಗೂ ಸಾಕ್ಷ್ಯಗಳು ಲಭ್ಯವಾದರೆ ನಾಗೇಂದ್ರ ಅವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲು ಇ.ಡಿ. ಮುಂದಾಗುವ ಸಾಧ್ಯತೆ ಇದೆ.





